ಉಜಿರೆ : ಪಿಯುಸಿ ಶಿಕ್ಷಣ ವಿದ್ಯಾರ್ಥಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡುವ ಹಾಗು ನಮ್ಮ ಕನಸುಗಳಿಗೆ ಹತ್ತಿರವಾಗುವ ಮತ್ತೊಂದು ಪಯಣವನ್ನು ಪ್ರಾರಂಭಿಸುವ ಸಂದರ್ಭದ. ಸಣ್ಣ ಸಣ್ಣ ಒಳ್ಳೆಯ ಅಭ್ಯಾಸಗಳು ನಿಮ್ಮ ಜೀವನದ ಭವ್ಯ ದೇವಾಲಯವನ್ನು ನಿರ್ಮಿಸುತ್ತದೆ. ಕನಸು ಯಾವುದೇ ಆಗಿದ್ದರು ಅದನ್ನು ಸಾಕಾರಗೊಳಿಸುವ ಶಕ್ತಿ ನಮ್ಮೊಳಗೆ ಇದೆ. ನಮ್ಮ ಪರಿಸ್ಥಿತಿಗಳು ನಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ನಾವು ಕೈಗೊಳ್ಳವ ದೃಢ ನಿರ್ಧಾರಗಳು ನಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಉಜಿರೆಯ ಸೋನಿಯಾ ಯಶೋವರ್ಮ ಅಭಿಪ್ರಾಯ ಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ಪಿಯುಸಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಸಭಾ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ಸಂಸ್ಥೆಯ ಹೆಮ್ಮೆ ಅದರ ಕಟ್ಟಡಗಳಲ್ಲ, ಅದರ ಹಿರಿಯ ವಿದ್ಯಾರ್ಥಿಗಳಾಗಿರುತ್ತಾರೆ. ಈ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅವರ ಯಶಸ್ವಿನ ಮೂಲ ಬುದ್ಧಿವಂತಿಕೆ ಮಾತ್ರವಲ್ಲ ಅವರು ಇಲ್ಲಿ ಕಲಿತ ಶಿಸ್ತು , ಪರಿಶ್ರಮ ಸಮಯ ಪಾಲನೆ ಹಾಗೂ ಇಲ್ಲಿನ ಮೌಲ್ಯಗಳು.
ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಕೇವಲ ಸಹಪಾಠಿಗಳನ್ನು ಪಡೆಯುವುದಿಲ್ಲ. ಒಳ್ಳೆಯ ಸ್ನೇಹಿತರನ್ನು ಪಡೆಯುತ್ತಾರೆ. ಕೇವಲ ಶಿಕ್ಷಕರನ್ನು ಪಡೆಯುವುದಿಲ್ಲದೇ ಬದುಕಿನ ಮಾರ್ಗದರ್ಶಕರನ್ನು ಪಡೆಯುತ್ತಾರೆ. ಕೇವಲ ಶಿಕ್ಷಣವನ್ನು ಪಡೆಯುವುದಲ್ಲದೇ ಬದುಕಿನ ದಾರಿದೀಪವನ್ನು ಪಡೆಯುತ್ತಾರೆ ಎಂದು ವಿದ್ಯಾರ್ಥಿ ಹಾಗು ಪೋಷಕರಿಗೆ ಕಿವಿಮಾತು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಯಶಸ್ಸು ಕಾಣಲು ತೆರೆದ ಮನಸ್ಸಿನ ಕಲಿಕೆಯ ಹಂಬಲ ಮತ್ತು ಆಸಕ್ತಿ ಮುಖ್ಯ. ಹೊಸತವನ್ನು ಕಲಿಯುವುದರಿಂದ ಅದು ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ವಸತಿ ನಿಲಯಗಳು ಜೀವನ ಶಿಕ್ಷಣವನ್ನು ಕಲಿಸುತ್ತದೆ. ಇಲ್ಲಿ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದರ ಜೊತೆಗೆ ಮಹತ್ತರವಾದ ಬದಲಾವಣೆಗಳನ್ನು ತರುತ್ತದೆ. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯ ಜೊತೆಗೆ ಕೃತಜ್ಞಾ ಭಾವ ಸಕಾರಾತ್ಮಕ ಚಿಂತನೆಯನ್ನು ಬೆಳೆಸಬೇಕು.
ಇಂದು ಸ್ಪರ್ಧಾತ್ಮಕ ಯುಗದಲ್ಲಿರುವುದರಿಂದ ವಿದ್ಯಾರ್ಥಿಗಳು ತಾಂತ್ರಿಕಕವಾಗಿ ಪರಿಣಿತರಾಗುವುದರ ಜೊತೆಗೆ ಕೃಯಾತ್ಮಕ ಯೋಚನೆ ಮತ್ತು ಸಮೂಹ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ಅಂಕಗಳು ಅವಕಾಶಗಳನ್ನು ಕಲ್ಪಿಸಿಕೊಟ್ಟರೆ, ವ್ಯಕ್ತಿತ್ವಗಳು ಸ್ಥಾನಮಾನವನ್ನು ತಂದು ಕೊಡುತ್ತದೆ ಎಂದು ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್ ಮಾತನಾಡಿ, ವಸತಿ ನಿಲಯದ ವ್ಯವಸ್ಥೆಗಳು ಹಾಗು ಶೈಕ್ಷಣಿಕ ಚಟುವಟಿಕೆಗಳ ಮಾಹಿತಿಯನ್ನು ಹಂಚಿಕೊಂಡರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಚಾರ್ಯ ಮನೀಶ್ ಕುಮಾರ್, ನಿಲಯದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪವಿತ್ರೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ನಿಲಯದ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ವಾಣಿ ಸ್ವಾಗತಿಸಿ, ಉಪನ್ಯಾಸಕಿ ಕವಿತಾ ನಿರೂಪಿಸಿ ವಂದಿಸಿದರು.












