ಕಡಿರುದ್ಯಾವರ: ಇಲ್ಲಿಯ ಕಾನರ್ಪ ಪಣಿಕಲ್ ರಾಘವೇಂದ್ರ ಭಟ್ಟರ ಮನೆಯಿಂದ ತೋಟತ್ತಾಡಿ ಅನಿಲ್ ಎಂಬವರ ಮನೆಗೆ ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ಅಡ್ಡಗಟ್ಟಿ ತಡೆಯಲು ಬಂದವರ ಮೇಲೆ ಡಿಕ್ಕಿ ಹೊಡೆಯುವ ರೀತಿಯಲ್ಲಿ ಬಂದು ಪರಾರಿಯಾದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಅಕ್ರಮ ಗೋ ಸಾಗಾಟದ ಜಾಲ ಭಾಗಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಪನಿಕ್ಕಲ್ ರಾಘವೇಂದ್ರ ಭಟ್ಟರ ಮನೆಯಿಂದ ಹೊರಟಿದ್ದ ಗೋಕಳ್ಳರು ಪಿಕಪ್ ನಲ್ಲಿ ತೆರಳುತ್ತಿದ್ದಾಗ, ಸಾರ್ವಜನಿಕರು ತಡೆಯಲು ಯತ್ನಿಸಿದ್ದಾರೆ . ದುಷ್ಕರ್ಮಿಗಳು ಯುವಕರ ಬೈಕಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆಯುವಂತೆ ಅತ್ಯಂತ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿ ಭೀತಿ ಸೃಷ್ಟಿಸಿದ್ದಾರೆ.
ತಮ್ಮ ಕೃತ್ಯವನ್ನು ಸ್ಥಳೀಯ ಯುವಕರು ಗಮನಿಸಿ ಬೆನ್ನಟ್ಟುತ್ತಿದ್ದಂತೆ ಗಾಬರಿಗೊಂಡ ಗೋ ಕಳ್ಳರು, ಮಂಜುಶ್ರೀನಗರದ ಹತ್ತಿರ ಯಾರಿಗೂ ತಿಳಿಯದಂತೆ ಗೋವನ್ನು ಬಿಟ್ಟು ಕಾಲ್ಕಿತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಸಕಾಲದಲ್ಲಿ ಕಾರ್ಯಪ್ರವೃತ್ತರಾಗಿ ವಾಹನದಲ್ಲಿದ್ದ ಒಬ್ಬ ಆರೋಪಿ(ಅನಿಲ್ ತೋಟತ್ತಾಡಿ )ಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಕಪ್ನಲ್ಲಿದ್ದ ಇನ್ನುಳಿದ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.ಸ್ಥಳಕ್ಕೆ ಧಾವಿಸಿದ ಪೊಲೀಸರು ಜಾನುವಾರು ವಶಕ್ಕೆ ಪಡೆದುಕೊಂಡಿದ್ದು, ಪರಾರಿಯಾದ ಇಬ್ಬರು ಆರೋಪಿಗಳ ಪತ್ತೆಗಾಗಿ ತೀವ್ರ ಜಾಲ ಬೀಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಬೈಕ್ ಸವಾರರ ಪ್ರಾಣಕ್ಕೆ ಸಂಚಕಾರ ತರುವಂತೆ ವರ್ತಿಸಿದ ಗೋ ಕಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












