ಬೆಳ್ತಂಗಡಿ: ಕುದುರೆಮುಖ ವನ್ಯಜೀವಿ ವಿಭಾಗದ ಬಂಡಾಜೆ ಕಾಡಿನಲ್ಲಿ ಗುಡ್ಡಜರಿತ ಉಂಟಾಗಿದೆ.
ದೂರದ ಅರಣ್ಯ ಪ್ರದೇಶದಲ್ಲಿ ಗುಡ್ಡ ಹಾಗೂ ಕಲ್ಲುಗಳು ಜರಿದು ಬಿದ್ದಿದ್ದು ಇದನ್ನು ಸುಮಾರು ಒಂದು ಕಿ.ಮೀ.ದೂರದಲ್ಲಿರುವ ಪರಿಸರದ ಜನರು ಕಂಡಿದ್ದಾರೆ.
ಈ ಅರಣ್ಯ ಪ್ರದೇಶದಲ್ಲಿ ಯಾವುದೇ ಜನ ವಾಸ್ತವ್ಯ ಇರುವುದಿಲ್ಲ. 2019ರ ನೆರೆ ಸಂದರ್ಭದಲ್ಲಿ ಬಂಡಾಜೆ ಅರಣ್ಯದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿ ಹಲವಾರು ಅವಾಂತರಗಳು ಸಂಭವಿಸಿದ್ದವು.ಈ ನೆನಪು ಇನ್ನೂ ತಾಲೂಕಿನ ಜನರಲ್ಲಿ ಹಸಿರಾಗಿದೆ. ಪ್ರಸ್ತುತ ಅಂತಹ ದೊಡ್ಡ ಪ್ರಮಾಣದ ಜರಿತ ಉಂಟಾಗಿಲ್ಲ.
ಬಂಡಾಜೆ ಅರಣ್ಯದಲ್ಲಿ ಇಂತಹ ಲಘು ಪ್ರಮಾಣದ ಕುಸಿತಗಳು ಮಳೆ ಸಂದರ್ಭ ಆಗಾಗ ನಡೆಯುತ್ತಿರುತ್ತವೆ. ಮಳೆಗಾಲ ಆರಂಭಕ್ಕೆ ಗುಡ್ಡ ಪ್ರದೇಶಗಳಲ್ಲಿ ಮಣ್ಣು ಸಡಿಲಗೊಳ್ಳುವುದು ಸಾಮಾನ್ಯವಾಗಿದ್ದು ಕೆಲವೊಂದು ಲಘು ಪ್ರಮಾಣದ ಜರಿತಗಳು ಉಂಟಾಗುತ್ತವೆ. ಆದರೆ ಇದರಿಂದ ಯಾವುದೇ ಅಪಾಯಕಾರಿ ಸನ್ನಿವೇಶ ಉಂಟಾಗುವುದಿಲ್ಲ. ಈ ಬಾರಿ ಸಣ್ಣ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.












