ಅಳದಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ಕರ್ನಾಟಕ, ನೇತ್ರಾವತಿ ವಲಯ ಮಂಗಳೂರು ಹಾಗೂ ಬೆಳ್ತಂಗಡಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಅಳದಂಗಡಿಯ ಶ್ರೀ ನಮನ ಸಭಾಭವನದಲ್ಲಿ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಅಳದಂಗಡಿಯ ಅರಸರಾದ ಡಾ. ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕವಾದ ಜೀವನ ಪದ್ಧತಿಯಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ಯೋಗದ ಅವಶ್ಯಕತೆ ಹೆಚ್ಚಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಉಚಿತ ಯೋಗ ಶಿಕ್ಷಣ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಖೆಯ ಯೋಗ ಬಂಧು ಹಾಗೂ ಅಮರ್ ಡ್ರಗ್ ಹೌಸ್ ನ ಮಾಲಕರೂ ಆಗಿರುವ ಗಣಪತಿ ಭಟ್ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. 48 ದಿನಗಳ ಈ ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಮನ ಸಭಾಭವನದ ಮಾಲಕರಾದ ಶ್ರೀ ಸತೀಶ್ ಶುಭ ಹಾರೈಸಿದರು.ಸಮಿತಿಯ ಪರಿಚಯ ಹಾಗೂ ಯೋಗ ಶಿಕ್ಷಣದ ಮಹತ್ವದ ಕುರಿತು ಸಂತೋಷ ಕುಮಾರ್ ಕಾಪಿನಡ್ಕ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಧೀರಜ್, ಮಾನಸ, ಪ್ರಶಾಂತ್, ಕುಮಾರ್, ವಿನಯ್ ಹಾಗೂ ಜ್ಯೋತಿರ್ಮಯಿ ಇವರುಗಳು ಯೋಗಾಭ್ಯಾಸದಿಂದ ತಮಗಾದ ಅನುಭವ ಹಂಚಿಕೊಂಡರು.ಶ್ರೀಮತಿ ರೂಪಾ ವಸಂತ್ ಸ್ವಾಗತಿಸಿ, ಕುಮಾರಿ ಜ್ಯೋತಿರ್ಮಯಿ ಪ್ರಾರ್ಥಿಸಿದರು. ವಸಂತ ಹೇಬೆಬೈಲು ಯೋಗ ಶಿಕ್ಷಣಾರ್ಥಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ವಿಜಯೇಂದ್ರ ಧನ್ಯವಾದ ಸಲ್ಲಿಸಿದರು. ಅಶ್ವತ್ಥ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಪ್ರೇಮಲತಾ ಗಣೇಶ್, ಕೋಮಲ ಪ್ರಕಾಶ್, ಗಣೇಶ್ ಪ್ರಸಾದ್, ಸುಕೇಶ್ , ಬೆಳ್ತಂಗಡಿ ಶಾಖೆಯ ಯೋಗ ಬಂಧುಗಳು ಹಾಗೂ ಯೋಗ ಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.












