ಧರ್ಮಸ್ಥಳ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಉಡುಪಿ ಜಿಲ್ಲೆಯ ಕಡೆಕಾರ್ ಗ್ರಾಮ ಪಂಚಾಯಿತಿಯ ಸ್ವಚ್ಛತಾ ಕಾರ್ಯಕ್ಕಾಗಿ ಘನತ್ಯಾಜ್ಯ ವಿಲೇವಾರಿ ವಾಹನ ಟಾಟಾ 407 ಟಿಪ್ಪರ್ ಅನ್ನು ಕೊಡುಗೆಯಾಗಿ ನೀಡಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್, ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಸಮ್ಮುಖದಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನದ ಕೀಲಿ ಕೈ ಹಸ್ತಾಂತರಿಸಿ, ವಾಹನವು ಗ್ರಾಮದ ಸ್ವಚ್ಛತಾ ಕಾರ್ಯಗಳಿಗೆ ಸದ್ಬಳಕೆ ಆಗಲಿ ಎಂದು ಶುಭ ಹಾರೈಸಿದರು.
ಈ ವೇಳೆ ಉಡುಪಿ ಆಯುರ್ವೇದ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ . ನಾಗರಾಜ ಪೂಜಾರಿ, ಉಡುಪಿ ಎಸ್.ಡಿ. ಎಂ ಆಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್ ಡಾ. ಜಯಕೃಷ್ಣ ನಾಯಕ್, ಉಡುಪಿಯ ಎಸ್.ಡಿ.ಎಂ ಫಾರ್ಮಸಿಯ ಜನರಲ್ ಮ್ಯಾನೇಜರ್ ಡಾ. ಮುರಳೀಧರ ಬಳ್ಳಾಳ್ ಹಾಗು ಉಜಿರೆ ಎಸ್.ಡಿ.ಎಂ ಕೇಂದ್ರ ಕಛೇರಿಯ ಸಿಬ್ಬಂದಿ ನಿಶಿತ್ ಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸಿದ್ದೇಶ್ ಮಾತನಾಡಿ, ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಗ್ರಾಮದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಆಸ್ಪತ್ರೆ ಪಂಚಾಯತ್ ವ್ಯಾಪ್ತಿಯಲ್ಲಿನ ಹಾಗು ಸುತ್ತಲಿನ ಪ್ರದೇಶಗಳ ಜನರ ಆರೋಗ್ಯ ಸಂಬಂಧಿಸಿದ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸುತ್ತಿರುವುದನ್ನು ಶ್ಲಾಘಿಸಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯ ವೈಖರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಹಸ್ತಾಂತರ ಸಂದರ್ಭದಲ್ಲಿ ಉಡುಪಿಯ ಕಡೆಕಾರ್ ಗ್ರಾಮ ಪಂಚಾಯಿತಿಯ ಪಿಡಿಒ ಸಿದ್ದೇಶ್, ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ತಾರಾನಾಥ್ ಆರ್. ಸುವರ್ಣ , ರಾಘವೇಂದ್ರ , ಪ್ರಶಾಂತ್ , ಸುಕನ್ಯಾ ಸೇರಿದಂತೆ ಸಿಬ್ಬಂದಿಗಳಾದ ಶಶಿಧರ್ ಬಂಗೇರ, ಮನೋಜ್ ಎಸ್. ಭಾಗಿಯಾಗಿದ್ದರು.












