ಪಡಂಗಡಿ : ಇದು ಪ್ರಸಿದ್ಧ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಸಂಪರ್ಕಿಸುವ ಕಿನ್ನಿಗೋಳಿ – ಪಡಂಗಡಿ ರಸ್ತೆ. ದೇರೆಮಾರು ಸೇತುವೆ ದಾಟಿ ಗದ್ದೆ ಮೇಲಿನ ರಸ್ತೆಯ ತುದಿಗೆ ಬಂದರೆ ಸಾರ್ವಜನಿಕರಿಗೆ ಸ್ವಾಗತ ಕೋರುವುದು ಆಪತ್ತನ್ನು ಹೊತ್ತು ನಿಂತಿರುವ ಕೆಸರಿನ ರಾಶಿ!
ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ರಸ್ತೆಯ ಬದಿಯ ಜಾಗವನ್ನು ಖರೀದಿಸಿ, ಅದಕ್ಕೆ ಅಪಾರ ಪ್ರಮಾಣದ ಮಣ್ಣು ತುಂಬಿಸಿ ರಸ್ತೆಯ ಮಟ್ಟಕ್ಕೆ ಎತ್ತರ ಮಾಡಿದ್ದಾರೆ. ಆದರೆ, ರಸ್ತೆ ಬದಿಯಲ್ಲಿ ಸರಾಗವಾಗಿ ಮಳೆನೀರು ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆಯನ್ನು ಮಾಡಿಲ್ಲ. ಇದರ ಪರಿಣಾಮವಾಗಿ, ಸುರಿಯುತ್ತಿರುವ ಮಳೆಯ ನೀರೆಲ್ಲಾ ಆ ಮಣ್ಣನ್ನು ಕೊಚ್ಚಿಕೊಂಡು ಬಂದು ಇಡೀ ರಸ್ತೆಯನ್ನೇ ಕೆಸರುಗದ್ದೆಯನ್ನಾಗಿ ಮಾಡಿದೆ.
ಜೂನ್ 11ರ ರಾತ್ರಿ ವೇಣೂರು ಕಡೆಯ ದಂಪತಿಗಳು ಸ್ಕೂಟರ್ನಲ್ಲಿ ಇದೇ ರಸ್ತೆಯ ಮೇಲೆ ತೆರಳುತ್ತಿದ್ದಾಗ ಈ ಕೆಸರು ಮಣ್ಣಿನಲ್ಲಿ ಟಯರ್ ಸ್ಲಿಪ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಹೆಲ್ಮೆಟ್ ಧರಿಸಿದ್ದ ಕಾರಣ ದೊಡ್ಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಲ್ಮೆಟ್ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?
ಪ್ರತಿದಿನ ನೂರಾರು ವಾಹನಗಳು, ಭಕ್ತಾಧಿಗಳು ಸಂಚರಿಸುವ ಈ ರಸ್ತೆಯ ದಯನೀಯ ಸ್ಥಿತಿ ಸ್ಥಳೀಯ ಆಡಳಿತಕ್ಕೆ ತಿಳಿದಿಲ್ಲವೇ? ಅಥವಾ ಖಾಸಗಿ ವ್ಯಕ್ತಿಗಳು ತಮಗೆ ಬೇಕಾದಂತೆ ಮಣ್ಣು ತುಂಬಿಸಿ ಸಾರ್ವಜನಿಕ ರಸ್ತೆಯನ್ನು ಹಾಳುಗೆಡವುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ?
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಆದಷ್ಟು ಬೇಗ ರಸ್ತೆ ಬದಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಬೇಕು ಮತ್ತು ರಸ್ತೆಯ ಮೇಲಿರುವ ಕೆಸರನ್ನು ತೆರವುಗೊಳಿಸುವುದು ಉತ್ತಮ. ಇಲ್ಲದಿದ್ದರೆ ಮುಂದಾಗುವ ಪ್ರತಿಯೊಂದು ಅಪಘಾತ ಹಾಗೂ ಅನಾಹುತಗಳಿಗೂ ಸ್ಥಳೀಯ ಆಡಳಿತವೇ ನೇರ ಹೊಣೆ ಹೊರಬೇಕಾದೀತು ಸ್ಥಳೀಯರ ಎಚ್ಚರಿಕೆ.













