23.8 C
ಪುತ್ತೂರು, ಬೆಳ್ತಂಗಡಿ
August 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅಭಿವೃದ್ಧಿ ಕುರಿತು ಮಂಗಳೂರು ವಲಯ ಸಮಾಲೋಚನಾ ಸಭೆ

ಮಂಗಳೂರು: ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಳೂರು ವಲಯದ ಉದ್ಯಮಿಗಳು ಮತ್ತು ಸಮಾಜದ ಪ್ರಮುಖರ ಸಮಾಲೋಚನಾ ಸಭೆ ನಗರದ ಹೋಟೆಲ್ ದೀಪಾ ಕಂಫರ್ಟ್‌ನಲ್ಲಿ ನಡೆಯಿತು.

ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ ಮಾತನಾಡಿ, ಸುಮಾರು 550 ವರ್ಷಗಳ ಇತಿಹಾಸ ಹೊಂದಿರುವ ಗೆಜ್ಜೆಗಿರಿ ಕ್ಷೇತ್ರವು ತುಳುನಾಡಿನ ಸುಮಾರು 270 ಗರಡಿಗಳಲ್ಲಿ ಆರಾಧಿಸಲ್ಪಡುವ ಬೈದರುಗಳು ಹಾಗೂ ಅವರ ತಾಯಿ ಮಾತೆ ದೇಯಿ ಬೈದೆತಿಯ ಮೂಲಸ್ಥಾನವಾಗಿದೆ ಎಂದರು. ಆದಿ ಧೂಮಾವತಿ, ಕುಪ್ಪೆ ಪಂಜುರ್ಲಿ, ಬ್ರಹ್ಮ ಬೈದರುಗಳು ಹಾಗೂ ಮಾತೆ ದೇಯಿ ಬೈದೆತಿ ಪರಿವಾರ ಶಕ್ತಿಗಳ ದಿವ್ಯ ಸಾನ್ನಿಧ್ಯ ಹೊಂದಿರುವ ಈ ಕ್ಷೇತ್ರವು ಬಿಲ್ಲವ ಸಮುದಾಯದ ಮೂಲ ಕ್ಷೇತ್ರವಾಗಿದೆ ಎಂದು ತಿಳಿಸಿದರು. 2016ರಲ್ಲಿ ಕ್ಷೇತ್ರದ ಸಮೀಪ ಸುಮಾರು ಐದು ಎಕರೆ ಜಾಗ ಖರೀದಿಸಿ, ಅದರ ಅಭಿವೃದ್ಧಿಗಾಗಿ ಗೆಜ್ಜೆಗಿರಿ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಗೆಜ್ಜೆಗಿರಿ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಮಾತನಾಡಿ, ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ, ದೇಯಿ ಬೈದೆತಿ ಆಯುರ್ವೇದ ಕೇಂದ್ರ, ಔಷಧೀಯ ಉದ್ಯಾನವನ ಹಾಗೂ ಇತರ ಮೂಲಸೌಕರ್ಯಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ ಎಂದು ತಿಳಿಸಿದರು.

ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಮಾತನಾಡಿ ತುಳುನಾಡಿನ ಜನಪದ ಪರಂಪರೆ ಹಾಗೂ ಭಕ್ತಿ ಭಾವದಿಂದ ಕೂಡಿದ ಈ ಕಾರ್ಣಿಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ವಾಸ್ತು ತಜ್ಞ ಪ್ರಮಾಲ್ ಕುಮಾರ್ ಅವರು ನಡೆಯುತ್ತಿರುವ ಕಾಮಗಾರಿಗಳ ಕುರಿತು ವಿವರ ನೀಡಿದರು. ಸಭೆಯಲ್ಲಿ ಚಂದ್ರಹಾಸ ಅಮೀನ್, ಡಾ. ಸದಾನಂದ ಪೂಜಾರಿ, ಊರ್ಮಿಳಾ ರಮೇಶ್ ಕುಮಾರ್, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು, ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಅಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಕಾನೂನು ಸಲಹೆಗಾರರಾದ ನವನೀತ್ ಹಿಂಗಾಣಿ, ಸದಸ್ಯರಾದ ಚಂದ್ರಹಾಸ ಉಚ್ಚಿಲ್, ನಾರಾಯಣ ಮಚ್ಚಿನ, ಹರೀಶ್ ಕೆ. ಪೂಜಾರಿ, ನಿತ್ಯಾನಂದ ನಾವರ, ನಾಗೇಶ್ ಪೂಜಾರಿ ಬೈಕಂಪಾಡಿ, ಕುಮಾರ್ ಇರುವೈಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಗೆಜ್ಜೆಗಿರಿ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಕೊಕ್ಕಡ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

ಗುಂಡೂರಿ: ಸಮೃದ್ದಿ ಗೃಹಪ್ರವೇಶ ಮುಂದೂಡಿಕೆ

Suddi Udaya

ಜೇಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ತಾಲೂಕಿನ ಹಲವು ಕಡೆ ಯೋಗ ದಿನಾಚರಣೆ ಅಂಗವಾಗಿ ಏಕಕಾಲಕ್ಕೆ 20 ತರಬೇತಿ ಕಾರ್ಯಕ್ರಮಗಳು

Suddi Udaya

ಅಪಾಯದಂಚಿನಲ್ಲಿರುವ ತೋಟತ್ತಾಡಿಯ ಸೇತುವೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಆಗ್ರಹ

Suddi Udaya

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ನೆರಿಯ ಅರ್ಬಿಬೊಟ್ಟುನಲ್ಲಿ ಕುಸಿಯುವ ಹಂತದಲ್ಲಿರುವ ಕಿರುಸೇತುವೆ

Suddi Udaya
error: Content is protected !!