23.8 C
ಪುತ್ತೂರು, ಬೆಳ್ತಂಗಡಿ
August 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೆಮ್ಮಿನ ಸಿರಪ್‌ ಗೆ ವೈದ್ಯರ ಚೀಟಿ ಕಡ್ಡಾಯ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಮಂಗಳೂರು: ‘ಕೆಮ್ಮಿನ ಸಿರಪ್’ ಬಳಕೆಯ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದ್ದು, ವೈದ್ಯರ ಸಲಹೆ ಇಲ್ಲದೇ ಮಕ್ಕಳಿಗೆ ‘ಕೆಮ್ಮಿನ ಸಿರಪ್’ ಸೇರಿದಂತೆ ಯಾವುದೇ ರೀತಿಯ ಲಿಕ್ವಿಡ್ ಔಷಧಗಳನ್ನು (ಸಿರಪ್) ನೀಡಬಾರದು ಎಂದು ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. .

ಕೆಮ್ಮಿನ ಸಿರಪ್‌ಗಳ ದುರುಪಯೋಗದಿಂದಾಗಿ ಮಕ್ಕಳಲ್ಲಿ ಆರೋಗ್ಯದ ಗಂಭೀರ ಸಮಸ್ಯೆಗಳು ಎದುರಾಗಿದ್ದು, ಸಾವುಗಳು ವರದಿಯಾಗಿವೆ. ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಪೋಷಕರು, ಆರೈಕೆದಾರರು, ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯನ್ನು ಪಾಲನೆ ಮಾಡಬೇಕು ಎಂದು ತಿಳಿಸಿದೆ.


ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಅಥವಾ ಶೀತದ ಸಿರಪ್ ನೀಡಬಾರದು. 2ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ನಿರ್ದಿಷ್ಟ ಸಲಹೆ ಮೇರೆಗೆ ಮಾತ್ರ ಈ ಔಷಧಗಳನ್ನು ನೀಡಬೇಕು. ಐದು ವರ್ಷ ದಾಟಿದ ಮಕ್ಕಳಿಗೆ ವೈದ್ಯರ ಸಲಹೆಯಂತೆ ಬಳಸಬೇಕು. ಸಾಧ್ಯವಾದಷ್ಟು ಕಡಿಮೆ ಅವಧಿಗೆ, ಕನಿಷ್ಠ ಡೋಸ್‌ಗಳನ್ನು ಬಳಸಬೇಕು. ಬಹು ಔಷಧಗಳ ಸಂಯೋಜನೆ ಇರುವ ಸಿರಪ್‌ಗಳನ್ನು ಉಪಯೋಗಿಸಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


ಬಹುತೇಕ ಸಂದರ್ಭಗಳಲ್ಲಿ ಮಕ್ಕಳಲ್ಲಿ ಕೆಮ್ಮು ಮತ್ತು ಶೀತವು ಸುರಕ್ಷಿತ ಕ್ರಮಗಳಿಂದ ನಿಧಾನವಾಗಿ ಕಡಿಮೆಯಾಗುತ್ತವೆ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ದ್ರವ ಪದಾರ್ಥಗಳನ್ನು ನೀಡಬೇಕು. ಹೆಚ್ಚು ವಿಶ್ರಾಂತಿ ಮತ್ತು ನಿದ್ರೆಗೆ ಅವಕಾಶ ಮಾಡಿಕೊಡಬೇಕು. ಪೌಷ್ಟಿಕ ಆಹಾರ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ಸ್ವಯಂ ಔಷಧೋಪಚಾರ ಮಾಡಬಾರದು. ವೈದ್ಯರ ಸೂಚನೆ ಇಲ್ಲದೇ ಕೆಮ್ಮಿನ ಔಷಧ ಖರೀದಿಸಬಾರದು, ಬಳಸಬಾರದು. ಈ ಹಿಂದೆ ಬಳಸಿ ಉಳಿದ ಔಷಧವನ್ನು ಬಳಕೆ ಮಾಡಬಾರದು. ವೈದ್ಯರಲ್ಲದವರು ಶಿಫಾರಸು ಮಾಡಿದ ಔಷಧವನ್ನು ಬಳಸಬಾರದು. ಅವಧಿ ಮುಗಿದ ಔಷಧವನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಲಾಗಿದೆ.
ಅಸಹಜ ಪ್ರತಿಕ್ರಿಯೆ, ಅಧಿಕ ನಿದ್ರಾವಸ್ಥೆ, ವಾಂತಿ, ಉಸಿರಾಟದ ಸಮಸ್ಯೆ ಅಥವಾ ವೇಗದ ಉಸಿರಾಟದ ಸಮಸ್ಯೆ, ನಿರಂತರ ಅಥವಾ ಉಲ್ಬಣಗೊಳ್ಳುತ್ತಿರುವ ಕೆಮ್ಮು, ಜ್ವರ, ಆಹಾರ ಸೇವಿಸದಿರುವ ಸ್ಥಿತಿ ಮಕ್ಕಳಲ್ಲಿ ಕಂಡು ಬಂದರೆ ತಕ್ಷಣ ತಜ್ಞ ವೈದ್ಯರಿಗೆ ವರದಿ ಮಾಡಬೇಕು ಎಂದು ಆರೋಗ್ಯ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ: ಅಜ್ಜಿಯನ್ನುಕೊಲೆ ಮಾಡಿ ಚಿನ್ನಾಭರಣ ದರೋಡೆ ಪ್ರಕರಣ: ಬಂಧಿತನಾಗಿದ್ದ ಆರೋಪಿ ಅಶೋಕ್ ಅಸೌಖ್ಯದಿಂದ ಸಾವು

Suddi Udaya

ಅಳದಂಗಡಿ ವಿಠಲದಾಸ್ ನಿಧನ

Suddi Udaya

ನಾರಾವಿ ಜನಜಾಗೃತಿ ವಲಯಾಧ್ಯಕ್ಷರ ಆಯ್ಕೆ ಸಭೆ ಜನಜಾಗೃತಿಯ ನೂತನ ವಲಯಾಧ್ಯಕ್ಷರಾಗಿ ಮೋಹನ್ ಅಂಡಿಂಜೆ ಆಯ್ಕೆ

Suddi Udaya

ಬಂದಾರು :ಕುರಾಯ ಶ್ರೀ ಸದಾಶಿವ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ: ಗೊನೆ ಮುಹೂರ್ತ, ತೋರಣ ಮುಹೂರ್ತ, ಧ್ವಜಾರೋಹಣ

Suddi Udaya

ಬೆಳ್ತಂಗಡಿ: ನಿವೃತ್ತ ಮೆಸ್ಕಾಂ ಉದ್ಯೋಗಿ ಸಂಜೀವ ಶೆಟ್ಟಿ ನಿಧನ

Suddi Udaya

ಬೆಳಾಲು: ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ

Suddi Udaya
error: Content is protected !!