ಉಜಿರೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ- ಉಜಿರೆ ರಸ್ತೆಯ ಉಜಿರೆಯ ಕೆಳಗಿನ ಪೆಟ್ರೋಲ್ ಪಂಪ್ ಬಳಿ ಸಂಗ್ರಹವಾಗಿರುವ ಕೊಳಚೆ ನೀರು ಸಾಂಕ್ರಾಮಿಕ ರೋಗ ಭೀತಿ ಉಂಟು ಮಾಡಿದೆ.
ಉಜಿರೆಯ ಪ್ರಮುಖ ಪ್ರದೇಶವಾದ ಇಲ್ಲಿ ಶಾಲೆ, ಹಲವಾರು ಅಂಗಡಿ, ಮನೆಗಳು ಇವೆ. ಈ ಪ್ರದೇಶದ ಚರಂಡಿಯ ಸುಮಾರು 100 ಮೀ. ದೂರಕ್ಕೆ ಕೊಳಚೆ ನೀರು ಸಂಗ್ರಹಗೊಂಡಿದ್ದು ಪರಿಸರ ದುರ್ನಾತ ಬೀರುತ್ತಿದೆ.
ಪ್ರತಿ ಮಳೆಗಾಲದಲ್ಲಿ ಇದು ಇಲ್ಲಿನ ಸಮಸ್ಯೆಯಾಗಿದ್ದು ಈ ಬಾರಿ ಉಲ್ಬಣಿಸಿದೆ. ಕಳೆದ ವಾರ ಸುರಿದ ಮಳೆಯ ಜತೆ ಹರಿದ ಕೊಳಚೆ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹಗೊಂಡಿರುವುದು ಅಪಾಯಕಾರಿಯಾಗಿದೆ. ಮಳೆಗಾಲದಲ್ಲಿ ಆಗಾಗ ಈ ಪ್ರದೇಶದಲ್ಲಿ ಮಳೆ ನೀರು ಚರಂಡಿಯಿಂದ ರಸ್ತೆಗೆ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗುವುದು ಮಾಮೂಲು. ಜೋರಾದ ಮಳೆ ಸಂದರ್ಭ ಚರಂಡಿಯಲ್ಲಿ ಹರಿಯುವ ಕೊಳಚೆ ನೀರಿನ ಜತೆ ಮಳೆ ನೀರು ಸೇರಿ ರಸ್ತೆಯಲ್ಲಿ ಹರಿದು ಅಂಗಡಿ, ಮನೆಗಳ ಮುಂಭಾಗದವರೆಗೂ ಬರುತ್ತದೆ.
ಸಾಂಕ್ರಾಮಿಕ ರೋಗ ಭೀತಿ: ಪ್ರಸ್ತುತ ಕಳೆದ ಕೆಲವು ದಿನಗಳಿಂದ ಇಲ್ಲಿನ ಚರಂಡಿಯಲ್ಲಿ ತುಂಬಿರುವ ನೀರು ಲಾರ್ವಾ ಉತ್ಪತ್ತಿಗೆ ಕಾರಣವಾಗುತ್ತಿದ್ದು, ಪರಿಸರದ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಹರಡಿದೆ. ಸಮೀಪದಲ್ಲಿ ಶಾಲೆ ಇರುವುದರಿಂದ ಮಕ್ಕಳಿಗೂ ಇದು ಅಪಾಯಕಾರಿಯಾಗಿದೆ. ಹೆಚ್ಚು ಚರಂಡಿಯಲ್ಲಿ ಗಿಡಗಂಟಿ ಇಲ್ಲದಿದ್ದರೂ ಕೊಳಚೆ ನೀರು ಸರಿಯಾಗಿ ಹರಿಯದೆ ಸಂಗ್ರಹಗೊಳ್ಳುತ್ತಿದೆ. ಚರಂಡಿಯ ಪ್ರದೇಶದಲ್ಲಿ ನಿರ್ಮಿಸಿರುವ ಸಂಪರ್ಕ ರಸ್ತೆ ಅಲ್ಲಲ್ಲಿ ಮುಚ್ಚಿರುವುದು, ಚರಂಡಿ ಕಾಮಗಾರಿ ಪೂರ್ಣಗೊಳ್ಳ ದಿರುವುದು, ಚರಂಡಿಯಲ್ಲಿ ಕೇಬಲ್, ಪ್ಲಾಸ್ಟಿಕ್, ಬಾಟಲಿ ಮೊದಲಾದ ತ್ಯಾಜ್ಯಗಳು ಇದ್ದು ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿದೆ.
ಸುಸಜ್ಜಿತ ಚರಂಡಿ ಬೇಕು: ಈ ಪ್ರದೇಶದಲ್ಲಿ ಉಜಿರೆ ಗ್ರಾಮದ ಹೆಚ್ಚಿನ ಕೊಳಚೆ ನೀರು ಹರಿದು ಹೋಗುತ್ತದೆ. ಹೆದ್ದಾರಿ ಕಾಮಗಾರಿ ಇಲ್ಲಿ ನಡೆಯುತ್ತಿದೆ. ಹೆದ್ದಾರಿ ಕಾಮಗಾರಿ ವೇಳೆ ಇಲ್ಲಿ ಸುಸಜ್ಜಿತ ಚರಂಡಿ ನಿರ್ಮಾಣವಾಗಬಹುದು ಎಂಬ ಭರವಸೆಯಲ್ಲಿದ್ದ ಸ್ಥಳೀಯರಿಗೆ ಈಗ ಹೆಚ್ಚಿನ ಸಮಸ್ಯೆ ಕಂಡು ಬರುತ್ತಿದೆ. ಈ ಚರಂಡಿಯನ್ನು ವ್ಯವಸ್ಥಿತವಾಗಿ ನಿರ್ಮಿಸಿ ತಗ್ಗು ಪ್ರದೇಶದಲ್ಲಿ ಹರಿಯುವ ಹಳ್ಳಕ್ಕೆ ಸಂಪರ್ಕ ಕಲ್ಪಿಸುವ ಅಗತ್ಯವಿದೆ.












