ಬೆಳ್ತಂಗಡಿ: ಮಾದಕ ದ್ರವ್ಯ ಜೀವನವನ್ನು ಹಾಳು ಮಾಡುತ್ತದೆ. ಸ್ನೇಹಿತರು ಮಾದಕ ವ್ಯಸನಕ್ಕೆ ತುತ್ತಾದರೆ
ಶಿಕ್ಷಕರಿಗೆ ತಿಳಿಯದೆ ಇರಬಹುದು, ಆದರೆ ನಿಮ್ಮ ಸ್ನೇಹಿತರು ವ್ಯಸನಕ್ಕೆ ಬಲಿಯಾಗದಂತೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ, ಪ್ರಾಂಶುಪಾಲರಿಗೆ ಮಾಹಿತಿ ನೀಡಬೇಕು ಎಂದು ಬೆಳ್ತಂಗಡಿ ತಾಲೂಕು ಪೊಲೀಸ್ ಉಪಾಧೀಕ್ಷಕಿ ರೋಹಿಣಿ ಸಿ.ಕೆ. ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಬೆಳ್ತಂಗಡಿ ಉಪ ವಿಭಾಗ, ಬೆಳ್ತಂಗಡಿ ಪೊಲೀಸ್ ಠಾಣೆ ವತಿಯಿಂದ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ವತಿಯಿಂದ ಜೂ.23 ರಂದು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡ ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಇಲಾಖೆಯಿಂದ ಸಂಗಮಿತ್ರ ಎಂಬ ಸ್ಕ್ಯಾನರ್ ತಂತ್ರಜ್ಞಾನವಿದೆ. ಈ ಮೂಲಕ ಮಾದಕ ವ್ಯಸನಿಗಳ ಬಗ್ಗೆ ನಿಖರವಾಗಿ ತಿಳಿಯಬಹುದಾಗಿದೆ. ಇದರಿಂದ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗುತ್ತದೆ. ಹೆತ್ತವರು ಕಷ್ಟ ಪಟ್ಟು ಶಿಕ್ಷಣ ಒದಗಿಸುತ್ತಾರೆ, ಹಾಗಾಗಿ ಯಾವುದೇ ರೀತಿಯ ಮಾದಕ ದ್ರವ್ಯ ಇರಲಿ ಅದರಿಂದ ದೂರವಿರಿ. ಓದಿನ ಕಡೆ ಗಮನ ಹರಿಸಬೇಕು. ಮಾದಕ ದ್ರವ್ಯದ ಕುರಿತು ಮಾಹಿತಿ ಲಭಿಸಿದಲ್ಲಿ ಚೈಲ್ಡ್ ಹೆಲ್ಪ್ ಲೈನ್ 1098, 112 ಗೂ ಕರೆ ಮಾಡಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ವತ್ ಪಿಯು ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಉಪ ವಿಭಾಗ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್., ಪೊಲೀಸ್ ಉಪನಿರೀಕ್ಷಕ ಆನಂದ್ ಎಂ., ವಿದ್ವತ್ ಕಾಲೇಜು ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅನುಶ್ರೀ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.












