June 26, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿಯವರಿಗೆ ಬೀಳ್ಕೊಡುಗೆ

ಉಜಿರೆ: ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಸಮಗ್ರ ಬೆಳವಣಿಗೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಅವರ ಕೊಡುಗೆ ಅಪಾರವಾದುದು ಎಂದು ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು.

ಅವರು ಜೂ.24 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಬ್ಬರ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿಯವರ ಬೀಳ್ಕೊಡುಗೆ ಸಮಾರಂಭದ ಕುರಿತು ಮಾಹಿತಿ ನೀಡಿದರು.


ರಬ್ಬರ್ ಬೆಳೆಗಾರರ ಹಿತರಕ್ಷಣೆಗೆ ವಿಶೇಷ ಕಾಳಜಿ ವಹಿಸಿ, ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿಯವರು ಸುಧೀರ್ಘ ೩೫ ವರ್ಷಗಳ ಸೇವೆಯ ಬಳಿಕ ಸಂಸ್ಥೆಯಿಂದ ನಿವೃತ್ತಿ ಹೊಂದಲಿದ್ದಾರೆ ಎಂದರು.


1989ರಲ್ಲಿ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘಕ್ಕೆ ಲೆಕ್ಕಿಗನಾಗಿ ಸೇರಿ ಬಳಿಕ 1993ರಿಂದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಗಿ, ನಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ರಾಜು ಶೆಟ್ಟಿಯವರು ತಮ್ಮ ಜೀವನವನ್ನು ಸಂಘಕ್ಕಾಗಿ ಬೆಸೆದುಕೊಂಡು, ಸಂಸ್ಥೆಯನ್ನು ಅಭಿವೃದ್ಧಿಯ ಶಿಖರಕ್ಕೆ ಕೊಂಡೊಯ್ದವರು. ಸಂಘದ ಸದಸ್ಯರ ಹಿತಕ್ಕಾಗಿ ಸಂಘದ ಆಡಳಿತ ಮಂಡಳಿ ಹಮ್ಮಿಕೊಂಡ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿ ಎಲ್ಲರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.

ತಮ್ಮ ಪರಿಶ್ರಮ, ಪ್ರಾಮಾಣಿಕತೆ ಹಾಗೂ ದಕ್ಷ ಸೇವೆಯಿಂದ ಸಹಕಾರಿ ಕ್ಷೇತ್ರದಲ್ಲಿ ವಿಶಿಷ್ಟ ಹೆಜ್ಜೆ ಗುರುತನ್ನು ಮೂಡಿಸಿ, ಸಾವಿರಾರು ರಬ್ಬರು ಬೆಳೆಗಾರರ ಬದುಕಿಗೆ ಆಸರೆಯಾದ ಅಪರೂಪದ ವ್ಯಕ್ತಿತ್ವ ರಾಜು ಶೆಟ್ಟಿಯವರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನಿರ್ದೇಶಕರಾದ ಬಾಲಕೃಷ್ಣ ಗೌಡ ಕೇರಿಮಾರು, ಗ್ರೇಸಿಯನ್ ವೇಗಸ್, ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಪ್ರಸಾದ್ ಐ.ಎಸ್. ಉಪಸ್ಥಿತರಿದ್ದರು

ಆರ್ಥಿಕ ಶಿಸ್ತು ಕಾಪಾಡುವಲ್ಲಿ ರಾಜು ಶೆಟ್ಟಿಯವರ ಶ್ರಮವಿದೆ: ಶ್ರೀಧರ ಜಿ ಭಿಡೆ
ರಾಜು ಶೆಟ್ಟಿಯವರು ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿದ್ದ ಅವಧಿಯಲ್ಲಿ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸಂಘಕ್ಕೆ ಸ್ವಂತಕಟ್ಟಡ, ರಬ್ಬರ್ ಮೌಲೆಡ್ ಉತ್ಪನ್ನಗಳ ತಯಾರಿಕಾ ಘಟಕ, ನರ್ಸರಿ, ಗೋದಾಮು, ಶಾಖಾ ಕಟ್ಟಡಗಳು, ಮುಂಡಾಜೆಯಲ್ಲಿ ಸಂಘಕ್ಕೆ ನಿವೇಶನ ಖರೀದಿ, ಲ್ಯಾಟೆಕ್ಸ್ ಖರೀದಿ ವ್ಯವಸ್ಥೆ, ೩೩ ಖರೀದಿ ಕೇಂದ್ರಗಳ ಸ್ಥಾಪನೆ, ೯ ಕೇಂದ್ರಗಳ ಕಂಪ್ಯೂಟರೀಕರಣ, ಆನ್‌ಲೈನ್ ವ್ಯವಸ್ಥೆ, ವೇಬ್ರಿಡ್ಜ್ ನಿರ್ಮಾಣ ಮೊದಲಾದ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸಂಘವು ನಿರಂತರವಾಗಿ ಲಾಭದಾಯಕವಾಗಿ ಮುನ್ನಡೆಯುವಲ್ಲಿ ಆರ್ಥಿಕ ಶಿಸ್ತು ಕಾಪಾಡುವಲ್ಲಿ ರಾಜು ಶೆಟ್ಟಿಯವರ ಶ್ರಮವೂ ಇದೆ ಎಂದು ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ್ ಜಿ. ಭಿಡೆ ತಿಳಿಸಿದರು.

ರಾಜು ಶೆಟ್ಟಿಯವರ ಸಹಕಾರ ತತ್ವಗಳ ಮೇಲಿನ ಬದ್ಧತೆ ಮೆಚ್ಚುವಂತದ್ದು: ಅನಂತ್ ಭಟ್ ಮಚ್ಚಿಮಲೆ
ಮೂರು ದಶಕಗಳಿಗೂ ಅಧಿಕ ಅವಧಿಯ ಈ ಸೇವಾ ಪಯಣದಲ್ಲಿ ಸಹಕಾರ ತತ್ವಗಳ ಮೇಲಿನ ಬದ್ಧತೆ ಮತ್ತು ಸಮಾಜಸೇವೆಗೆ ಹೆಚ್ಚಿನ ಒತ್ತು ನೀಡಿರುವುದು ಪ್ರಾಮಾಣಿಕ ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ. ಸಂಘದ ಬೆಳವಣಿಗೆಯೊಂದಿಗೆ ತಮ್ಮ ಬದುಕನ್ನೇ ಬೆಸೆದುಕೊಂಡು, ಸಂಸ್ಥೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿರುವುದು ರಾಜು ಶೆಟ್ಟಿಯವರ ಸೇವಾ ಜೀವನದ ಹೆಮ್ಮೆಯ ಸಾಧನೆಯಾಗಿದೆ ಎಂದು ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ಹೇಳಿದರು.

ಮಹಾಸಭೆ ಹಾಗೂ ಬೀಳ್ಕೊಡುಗೆ: ಜೂ.30 ರಂದು 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಬೆಳಿಗ್ಗೆ ಗಂಟೆ 10 ರಿಂದ 11.30ರವರೆಗೆ ನಡೆಯಲಿದೆ. ನಂತರ ಉಜಿರೆ ರಬ್ಬರ್ ಸೊಸೈಟಿಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ರಾಜು ಶೆಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಸಹಕಾರಿ ಸಂಘಗಳ ಉಪನಿಬಂಧಕರಾದ ರಮೇಶ್ ಎಚ್.ಎನ್ ಭಾಗವಹಿಸಲಿದ್ದಾರೆ.

Related posts

ಪಿಯುಸಿ ಫಲಿತಾಂಶ; ನಯನಾಡು ಸುಶ್ಮಿತಾ ಆಶಾಲತಾ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್

Suddi Udaya

ಸುಲ್ಕೇರಿ ಗ್ರಾಮ ಪಂಚಾಯತ್ ನ ಗ್ರಾಮ ಸಭೆ: ಗರ್ಭಿಣಿಯರು, ಬೆನ್ನುನೋವಿದ್ದರು ಈ ರಸ್ತೆಯಲ್ಲಿ ಸಾಗಿದರೆ ಸಮಸ್ಯೆ ಗ್ಯಾರಂಟಿ

Suddi Udaya

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Suddi Udaya

ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಪಿಲಿಕಜೆಬೈಲ್ ವತಿಯಿಂದ ಶ್ರಮದಾನ

Suddi Udaya

ಕೊಯ್ಯೂರು ಪ್ರೌಢಶಾಲಾ ರಜತ ಮಹೋತ್ಸವ: ಗುರುವಂದನಾ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ವಿಧಿವಶ

Suddi Udaya
error: Content is protected !!