ಗುರುವಾಯನಕೆರೆ :“ಒಂದು ಕಾಲದಲ್ಲಿ ನಗರಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಲಭ್ಯವೆಂದು ನಂಬಲಾಗಿತ್ತು. ಇದರ ಪರಿಣಾಮವಾಗಿ ನಮ್ಮ ಪ್ರದೇಶದ ಅನೇಕ ಜನರು ಮಂಗಳೂರು-ಬೆಂಗಳೂರಿನಂತಹ ನಗರಗಳನ್ನೇ ವಿದ್ಯಾಭ್ಯಾಸಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಮಂಗಳೂರು-ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿರುವವರು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ನಮ್ಮ ಶಾಲಾ-ಕಾಲೇಜುಗಳನ್ನು ಆಯ್ಕೆ ಮಾಡಿಕೊಂಡಿರುವುದು ನಮ್ಮ ಸಂಸ್ಥೆಗಳು ಶಿಕ್ಷಣ ಕ್ಷೇತ್ರದಲ್ಲಿ ಗಳಿಸಿರುವ ನಂಬಿಕೆ ಹಾಗೂ ಖ್ಯಾತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಅವರು ಜೂ 17ರಂದು ಎಕ್ಸೆಲ್ ಟೆಕ್ನೊ ಸದಕೂಲ್ ನ ದೀಕ್ಷಾರಾಂಭ 2026 ರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಎಕ್ಸೆಲ್ ಟೆಕ್ನೊ ಶಾಲೆಯ ಪ್ರಾಂಶುಪಾಲರಾದ ಸುಮಿತ್ರಾ ಅವರು ಮಾತನಾಡಿ ಉತ್ತಮ ಧ್ಯೇಯದೊಂದಿಗೆ ಬೆಳೆಯುತ್ತಿರುವ ನಮ್ಮ ಸಂಸ್ಥೆ ತಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ಹೊಂದಿಕೊಳ್ಳಲು ನೆರವಾಗುವ ಎಲ್ಲಾ ಕೌಶಲ್ಯಗಳನ್ನು ನೀಡುತ್ತದೆ ಎಂದರು.

ಎಕ್ಸೆಲ್ ಟೆಕ್ನೊ ಸ್ಕೂಲ್ ಸಂಯೋಜಕರಾದ ಲೀನಾ ಫ್ಲೋರಿನ್ ಪಿಂಟೋ ಅವರು ಮಾತನಾಡಿ “ಶಿಸ್ತು ಘನತೆಯ ಅಡಿಪಾಯ ಅದು ಮನೆಯಲ್ಲಿ ಆರಂಭವಾಗಿ ಶಾಲೆಯಲ್ಲಿ ಮುಂದುವರಿಯಬೇಕು. ಶಿಸ್ತನ್ನು ಶಿಕ್ಷೆಯೆಂದು ಪರಿಗಣಿಸುವ ಬದಲು ಅದು ಜೀವನ ವಿಧಾನವಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಶಿಸ್ತನ್ನು ಮೂಡಿಸಲು ನಾವು ಕೆಲವು ಸರಳ ಹಾಗೂ ವಿದ್ಯಾರ್ಥಿಸ್ನೇಹಿ ನಿಯಮಗಳನ್ನು ಪರಿಚಯಿಸುತ್ತಿದ್ದೇವೆ. ಈ ನಿಯಮಾಭ್ಯಾಸಗಳು ಮುಂದೆ ಮಕ್ಕಳ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ನೆರವಾಗುತ್ತವೆ” ಎಂದರು.

ಶಿಕ್ಷಕಿ ಜೊಸ್ಲೀಟಾ ಲೋಬೋ ಕಾರ್ಯಕ್ರಮ ನಿರೂಪಿಸಿದರು. ವಿಲ್ಮಾ ಮೋನಿಸ್ ಸ್ವಾಗತಿಸಿದರು. ಪ್ರೇಮಾ ವಂದಿಸಿದರು. ಗೀತಾ ಉಜ್ವಲ್ ಶಾಲಾ ವಾಹನ ಸುರಕ್ಷತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಶಿಕ್ಷಕಿಯರಾದ ಚೇತನಾ, ಪೂರ್ಣಿಮಾ, ಲವೀನಾ ಸಹಕರಿಸಿದರು.












