ಬೆಳ್ತಂಗಡಿ: ಕನ್ಯಾಡಿ | ಗ್ರಾಮದ ಕೇಳ್ತಾಜೆ, ಪಡ್ಪು, ಸುರ್ಯ, ಬೊಳಿಯಂಜಿ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಿಂದ ಗ್ರಾಹಕರು ಬಹಳಷ್ಟು ಸಮಸ್ಯೆಗೆ ಒಳಗಾಗಿದ್ದಾರೆ.

ಕನ್ಯಾಡಿ ಗ್ರಾಮದ ಪಡ್ಪು ಎಂಬಲ್ಲಿ ಏರ್ಟೆಲ್ನ ಟವರ್ ಇದ್ದರೂ, ಯಾವ ಪ್ರಯೋಜಕ್ಕೂ ಇಲ್ಲದಂತಾಗಿದೆ. ಏರೆಟೆಲ್ ಟವರ್ನಿಂದ ಸುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಮರ್ಪಕವಾಗಿ ದೊರೆಯುತ್ತಿದೆ. ಆದರೆ ಪಡ್ಪು ಎಂಬಲ್ಲಿ ಹಾಕಿರುವ ಟವರ್ನ ಅಡಿಯಲ್ಲಿ ಗ್ರಾಹಕರು ನಿಂತರೂ ನೆಟ್ವಕ್ ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇದೇ ಪರಿಸರದಲ್ಲಿ ಇತಿಹಾಸ ಪ್ರಸಿದ್ದ ಮಣ್ಣಿನ ಹರಕೆಯ ಪ್ರಸಿದ್ಧ ಕ್ಷೇತ್ರ ಸುರ್ಯ ದೇವಸ್ಥಾನ ಇದೆ. ಇಲ್ಲಿಗೆ ದೂರದ ಊರುಗಳಿಂದ ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ಸುರ್ಯ ಪ್ರದೇಶದಲ್ಲಿ ಏರ್ಟೆಲ್ ನೆಟ್ ವರ್ಕ್ ಸಿಗುವುದೇ ಇಲ್ಲ. ಇದರಿಂದಾಗಿ ದೂರದ ಊರಿನ ಭಕ್ತರಿಗೂ ಬಹಳಷ್ಟು ಸಮಸ್ಯೆ ಕಾಡಿದೆ.
ಈ ಪರಿಸರದ ಉದ್ಯೋಗಿಗಳಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ನೆಟ್ವರ್ಕ್ ಸಮಸ್ಯೆ ದೊಡ್ಡ ತಲೆನೋವು ತಂದಿದೆ. ಇದರ ಬಗ್ಗೆ ಕಂಪೆನಿಯ ಅಧಿಕಾರಿಗಳಿಗೆ ದೂರು ಕೊಟ್ಟಾಗ ಬಂದು ನೋಡುತ್ತೇವೆ ಎಂದು ಭರವಸೆ ನೀಡುತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಹಕರು ದೂರಿಕೊಂಡಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಕಂಪೆನಿಯವರು ಗ್ರಾಹಕರಿಗಾಗುತ್ತಿರುವ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಒತ್ತಾಯಿಸಿದ್ದಾರೆ.












