ಉಜಿರೆ: ಶ್ರೀ ಧ. ಮಂ. ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನಲ್ಲಿ ಭವಿಷ್ಯಕ್ಕಾಗಿ ಉಳಿತಾಯ ಎಂಬ ಕುರಿತು ಉಪನ್ಯಾಸ ಕಾರ್ಯಕ್ರಮವು ಇಂದು (ಜೂ.25) ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ವಿಭಾಗದ ಅಂಚೆ ಕಛೇರಿಯ ಮಾರ್ಕೆಟ್ ಎಕ್ಸಿಕ್ಯೂಟಿವ್ ಗುರುಪ್ರಸಾದ್ ಕೆ ಎಸ್ ಮಾತನಾಡಿದರು.

ಭಾರತೀಯ ಅಂಚೆ ಕಚೇರಿಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೇವಲ ಪತ್ರಗಳನ್ನು ತಲುಪಿಸುವುದಷ್ಟೇ ಅಲ್ಲದೆ, ಹಣಕಾಸು, ಉಳಿತಾಯ ಯೋಜನೆಗಳು, ಆಧಾರ್ ನವೀಕರಣ, ವಿಮೆ, ಪಾರ್ಸೆಲ್ ಸಾಗಣೆ ಇನ್ನೂ ಹಲವಾರು ಸೇವೆಗಳನ್ನು ಒದಗಿಸುವ ಕೇಂದ್ರ ಸರ್ಕಾರದ ಸಂಸ್ಥೆಯಾಗಿದೆ ಹಾಗೂ ಜನರ ಆರ್ಥಿಕ ಭದ್ರತೆ, ಸಂವಹನ ಮತ್ತು ಸೇವೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಮಹತ್ವವಾದ ಕೊಡುಗೆಗಳನ್ನು ನೀಡುತ್ತಿವೆ. ಹಾಗಾಗಿ ಅಂಚೆ ಕಚೇರಿಯಲ್ಲಿರುವ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಿ. ಭವಿಷ್ಯಕ್ಕಾಗಿ ಉಳಿತಾಯ ಮಾಡುವುದರಿಂದ ನಮ್ಮ ಜೀವನ ಸುಖಮಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ ಸಂತೋಷ್ ಆಲ್ಬರ್ಟ್ ಸಲ್ಡಾನ ವಹಿಸಿ ಅಂಚೆ ಕಚೇರಿಯ ಸೌಲಭ್ಯಗಳು ನಮ್ಮ ಬದುಕಿಗೆ ಸಹಕಾರಿ. ಹಾಗಾಗಿ ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಿ ಮತ್ತು ಇತರರಿಗೆ ಈ ಮಾಹಿತಿಯನ್ನು ಹಂಚಿರಿ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನ ವಿದ್ಯಾರ್ಥಿ ನಾಯಕಿಯರಾದ ಶ್ರವಣ ಮಹಾಪುರುಷ ಮತ್ತು ರಂಝೀನಾ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಾದ ವಿನಿಶಾ ಮತ್ತು ಬಳಗ ಪ್ರಾರ್ಥಿಸಿ, ರಮೇಶ ಸ್ವಾಗತಿಸಿ, ಶೀತಲ್ ಅತಿಥಿ ಪರಿಚಯಿಸಿ, ಚೈತ್ರಾ ಪಿ ವಂದಿಸಿ, ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.












