June 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ವಿವಿಧೆಡೆ ಸ್ವಚ್ಛತಾ ಶ್ರಮದಾನ ಹಾಗೂ ರಸ್ತೆ ಬದಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡಿದವರಿಗೆ ರೂ.5ಸಾವಿರ ದಂಡ

ಉಜಿರೆ: ಮಹಾತ್ಮ ಗಾಂಧಿ ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ವಿಶೇಷ ಸ್ವಚ್ಛತಾ ಅಭಿಯಾನದ ಅಂಗವಾಗಿ ಉಜಿರೆ ಗ್ರಾಮದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಶ್ರಮದಾನ ಹಾಗೂ ಅಕ್ರಮ ತ್ಯಾಜ್ಯ ವಿಲೇವಾರಿ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.

ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ, ಗೆಳೆಯರ ಬಳಗ ಮುಂಡತೋಡಿ, ಪ್ರಗತಿ ಯುವಕ ಮಂಡಲ ಮಾಚಾರು, ಸುಜ್ಞಾನ ಹಿರಿಯ ವಿಧ್ಯಾರ್ಥಿ ಸಂಘ ಬದನಾಜೆ, ಮುಹಿಯುದ್ದೀನ್ ಜುಮಾ ಮಸೀದಿ ಮಾಚಾರು , ಶ್ರೀ ಕೃಷ್ಣ ಭಜನಾ ಮಂಡಳಿ ಚಾವಡಿ ಇವುಗಳ ಸಹಭಾಗಿತ್ವದಲ್ಲಿ ಉಜಿರೆ–ಬೆಳಾಲು ರಸ್ತೆಯ ಮಾಚಾರು ಹಾಗೂ ಪೆರ್ಲ ಕಾಲೇಜು ರಸ್ತೆ ಪ್ರದೇಶಗಳಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ರಸ್ತೆ ಬದಿ ಬೆಳೆದಿದ್ದ ಕಳೆಗಿಡಗಳನ್ನು ತೆರವುಗೊಳಿಸಿ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ, ಪಂಚಾಯತ್ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರ ಜಂಟಿ ಕಾರ್ಯಾಚರಣೆಯಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಅಪಾಯಕಾರಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಪ್ರಕರಣವನ್ನು ರೆಡ್‌ಹ್ಯಾಂಡ್ ಆಗಿ ಪತ್ತೆಹಚ್ಚಲಾಯಿತು.

ಪರಿಶೀಲನೆಯ ವೇಳೆ ಉಜಿರೆ ಡಯಾಗ್ನೊಸ್ಟಿಕ್ ಲ್ಯಾಬೋರೇಟರಿಯವರು ರಸ್ತೆ ಬದಿಯಲ್ಲಿ ಬಳಸಿದ ಸಿರಿಂಜ್‌ಗಳು, ಮಿಶ್ರ ತ್ಯಾಜ್ಯ ಹಾಗೂ ಇತರೆ ಅಪಾಯಕಾರಿ ತ್ಯಾಜ್ಯಗಳನ್ನು ಅಕ್ರಮವಾಗಿ ಎಸೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಸಂಬಂಧಪಟ್ಟ ಸಂಸ್ಥೆಗೆ ತಕ್ಷಣವೇ ರೂ.5,000/- ದಂಡ ವಿಧಿಸಲಾಯಿತು.

ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ತ್ಯಾಜ್ಯ, ವಿಶೇಷವಾಗಿ ಅಪಾಯಕಾರಿ ತ್ಯಾಜ್ಯವನ್ನು ಅಕ್ರಮವಾಗಿ ವಿಲೇವಾರಿ ಮಾಡುವವರ ವಿರುದ್ಧ ಮುಂದೆಯೂ ಯಾವುದೇ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ತಮ್ಮ ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ, ಗ್ರಾಮ ಪಂಚಾಯತ್‌ನ ‘ಸ್ವಚ್ಛ ವಾಹಿನಿ’ ವಾಹನಕ್ಕೆ ಮಾತ್ರ ಹಸ್ತಾಂತರಿಸುವಂತೆ ಹಾಗೂ ಅಕ್ರಮ ತ್ಯಾಜ್ಯ ವಿಲೇವಾರಿ ಕಂಡುಬಂದಲ್ಲಿ ಪಂಚಾಯತ್‌ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಮುಂಡತ್ತೋಡಿ ಶಾಲೆಯ ಮುಖ್ಯಶಿಕ್ಷಕಿ ಸೇವಂತಿ, ಗೆಳೆಯರ ಬಳಗದ ಅಧ್ಯಕ್ಷ ವೆಂಕಪ್ಪ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿನುತಾ, ಬದನಾಜೆ ಶಾಲೆಯ ಮುಖ್ಯಶಿಕ್ಷಕ ಗೋಪಾಲ, ಕೊಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸುರೇಶ್, ಪ್ರಗತಿ ಯುವಕ ಮಂಡಳಿಯ ಪದಾಧಿಕಾರಿಗಳು, ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘದ ಸೋಮಶೇಖರ್ ಹಾಗೂ ಅಕ್ಷಯ್, ಮಾಜಿ ಸದಸ್ಯರಾದ ಇಲಿಯಾಸ್, ಮುಹಿಯುದ್ದೀನ್ ಜುಮಾ ಮಸೀದಿಯ ಸದಸ್ಯರು, ಹಾಗೂ ಮಾಚಾರು ಮತ್ತು ಪೆರ್ಲ – ಮುಂಡತೋಡಿ ಪರಿಸರದ ನಾಗರಿಕರು ಸಕ್ರಿಯವಾಗಿ ಭಾಗವಹಿಸಿದರು.

ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛತಾ ಅಭಿಯಾನದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಕೈಜೋಡಿಸಿ ಉಜಿರೆಯನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಗ್ರಾಮವನ್ನಾಗಿ ರೂಪಿಸಲು ಸಹಕರಿಸುವಂತೆ ಮನವಿ ಮಾಡಲಾಗಿದೆ.

Related posts

ಗೇರುಕಟ್ಟೆ ಸೌಹಾರ್ದ ಟ್ರೋಫಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

Suddi Udaya

ಕಣಿಯೂರು ವಿಸ್ತೃತ ಡೈರಿ ಉದ್ಘಾಟನೆ-ಹೈನುಗಾರಿಕಾ ಮಾಹಿತಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ರೈತಮೋರ್ಚಾದ ಸಭೆ

Suddi Udaya

ಜ.25: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪಿ.ಯು.ಶಿಕ್ಷಣ : ಭವಿಷ್ಯದ ಅವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮವು

Suddi Udaya

ಶುಭಾವಿವಾಹ ಧನಂಜಯಮತ್ತುಶೋಭಾ

Suddi Udaya

ಚುನಾವಣಾ ಕೇಂದ್ರದ ಎಡವಟ್ಟು: ಮತಗಟ್ಟೆ ಸಂಖ್ಯೆ ಬದಲಾವಣೆ: ಕೊಕ್ಕಡದಿಂದ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಿದ ಮತದಾರ

Suddi Udaya
error: Content is protected !!