ಬೆಳ್ತಂಗಡಿ: ಸಮಾಜಸೇವಾ ಉದ್ಧೇಶದಿಂದ ಸ್ಥಾಪಿತವಾದ ರೋಟರಿ ಸಂಘಟನೆಗೆ ಶತಮಾನದ ಇತಿಹಾಸ ಇದೆ. ರೋಟರಿಯು ಇಂದು ಜಾಗತಿಕವಾಗಿ ಸುಮಾರು 200 ದೇಶಗಳಲ್ಲಿ 35000 ಕ್ಲಬ್ ಗಳಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಸದಸ್ಯರ ಮೂಲಕ ಮನುಕುಲದ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಈ ವರ್ಷದ ಚಟುವಟಿಕೆಗಳು ನೂತನ ಪದಾಧಿಕಾರಿಗಳ ಪದಗ್ರಹಣದೊಂದಿಗೆ ಆರಂಭವಾಗಲಿದೆ.ಜು 2 ರಂದು ಸಂಜೆ 7 ಘಂಟೆಗೆ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ರೋಟರಿ ಕ್ಲಬ್ ನ ಪದಗ್ರಹಣ ನಡೆಯಲಿದೆ ಎಂದು ನೂತನ ಅಧ್ಯಕ್ಷ ಶ್ರೀದರ್ ಕೆ.ವಿ ಹೇಳಿದರು.
ಅವರು ಜೂ 29ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಾರ್ಥಕ ಸೇವೆಯ ಐದು ದಶಕಗಳನ್ನು ಪೂರೈಸಿರುವ ಬೆಳ್ತಂಗಡಿ ರೋಟರಿ ಕ್ಲಬ್ ಮಂಗಳೂರು ಉತ್ತರ ರೋಟರಿ ಕ್ಲಬ್ ನ ಪ್ರಾಯೋಜಕತ್ವದಲ್ಲಿ 55 ವರ್ಷಗಳ ಹಿಂದೆ 22-12-1971 ರಲ್ಲಿ ತನ್ನ ಸೇವಾ ಕಾರ್ಯಕ್ರಮಗಳನ್ನು ಆರಂಭಿಸಿತು. ಬೆಳ್ತಂಗಡಿಯ ನ್ಯಾಯವಾದಿ ಪ್ರೊ.ಎನ್.ಜೆ. ಕಡಂಬರು ಸ್ಥಾಪಕ ಅಧ್ಯಕ್ಷರಾಗಿ, ಸುಧೀರ್ ಜಿ.ಭಿಡೆಯವರು ಸ್ಥಾಪಕ ಕಾರ್ಯದರ್ಶಿಯಾಗಿ ಇದರ ಜವಾಬ್ದಾರಿಯನ್ನು ಆಗ ಯಶಸ್ವಿಯಾಗಿ ನಿರ್ವಹಿಸಿದ್ದರು. ಬೆಳ್ತಂಗಡಿ ರೋಟರಿ ಸಂಸ್ಥೆ ಕಳೆದ 55 ವರ್ಷಗಳಲ್ಲಿ ತಾಲೂಕಿನಾದ್ಯಂತ ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವಹಾಗೂ ಜನಪರ ಕೆಲಸ ಮಾಡುವ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಗೌರವ ಸದಸ್ಯರಾಗಿರುವ ಈ ಸಂಸ್ಥೆಯು ಇಂದು ನಮ್ಮ ತಾಲೂಕಿನಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ 73 ಸಾಧಕರನ್ನು ಸದಸ್ಯರಾಗಿ ಹೊಂದಿದೆ. ನಮ್ಮೊಂದಿಗೆ ರೋಟರಿ ಸಹ ಸಂಸ್ಥೆಗಳಾಗಿ 4 ರೋಟರಿ ಸಮುದಾಯ ದಳಗಳು, 7 ಇಂಟರಾಕ್ಟ್ ಕ್ಲಬ್ ಗಳು ಹಾಗೂ ಆನ್ಸ್ ಕ್ಲಬ್ ಸೇವಾ ಚಟುವಟಿಕೆಗಳಲ್ಲಿ ಸಹಭಾಗಿಗಳಾಗಿದ್ದಾರೆ ಎಂದರು.
ಕಳೆದ ಸಾಲಿನಲ್ಲಿ ಕ್ಲಬ್ ನ ಸಾರಥ್ಯವನ್ನು ವಹಿಸಿದ್ದ ರೊ| ಡಾ.ಪ್ರಕಾಶ್ ಪ್ರಭು, ರೊ| ಡಾ. ದಯಾಕರ್ ಹಾಗೂ ಅವರ ತಂಡ ಅತ್ಯುತ್ತಮ ಸೇವಾ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಂಡು ನಮ್ಮ ಜಿಲ್ಲಾ ಸಮ್ಮೇಳನದಲ್ಲಿ ಡೈಮಂಡ್ ಪ್ಲಸ್ ಪದಕದೊಂದಿಗೆ ಪುರಸ್ಕೃತಗೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ಈ ವರ್ಷ ಅಸಿಸ್ಟೆಂಟ್ ಗವರ್ನರ್ ಆಗಿ ರೊ.ಡಾ ಶಶಿಧರ ಡೋಂಗ್ರೆ ಅವರು ಆಯ್ಕೆಯಾಗಿರುವುದು ಅದೇ ರೀತಿ ರೋಟರಿ ಜಿಲ್ಲೆಯ ಇಂಟರಾಕ್ಟ್ ಪ್ರತಿನಿಧಿಯಾಗಿ ಎಸ್.ಡಿ.ಎಂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಉಜಿರೆಯ ಕ್ಷಿತಿಜ್ ಎಸ್ ಶೆಟ್ಟಿ ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ. ಬೆಳ್ತಂಗಡಿ ರೋಟರಿ ಕ್ಲಬ್ನ 56 ನೇ ವರ್ಷದ ಅಧ್ಯಕ್ಷರಾಗಿ ರೊ. ಶ್ರೀಧರ್ ಕೆ.ವಿ,, ಕಾರ್ಯದರ್ಶಿಯಾಗಿ ರೊ.ಡಾ.ರಾಘವೇಂದ್ರ ಪಿದಮಲೆ, ಖಜಾಂಚಿಯಾಗಿ ರೊ. ಅಬೂಬ್ಬಕ್ಕರ್, ದಂಡಪಾಣಿಯಾಗಿ ರೊ. ವೈಕುಂಠ ಪ್ರಭು, ಹಾಗೂ ನಿರ್ದೇಶಕರಾಗಿ ವಿದ್ಯಾ ಕುಮಾರ್, ಅನಂತ ಭಟ್ ಮಚ್ಚಿಮಲೆ, ಗಾಯತ್ರಿ ದಿನೇಶ್, ಮನೋರಮಾ ಭಟ್, ಪೂರನ್ ವರ್ಮ, ಕಿರಣ್ ಹೆಬ್ಬಾರ್ ಸಂದೇಶ್ ರಾವ್, ಡಾ.ಜಯಕುಮಾರ್ ಶೆಟ್ಟಿ, ಅರುಣ್ ಕುಮಾರ್, ಬಿ.ಕೆ ಧನಂಜಯ ರಾವ್,ಮೆಜರ್ ಜನರಲ್ ಎಂ.ವಿ.ಭಟ್,ಪ್ರವೀಣ್ ಗೋರೆ, ಡಾ.ಶಶಿಕಾಂತ್ ಡೋಂಗ್ರೆ ಡಾ.ಗೋಪಾಲಕೃಷ್ಣ, ಡಾ.ಗೋವಿಂದ ಕಿಶೋರ್,ಯಶವಂತ ಪಟವರ್ಧನ್,ಡಿ.ಎಂ.ಗೌಡ, ಶರತಕೃಷ್ಣಪಡ್ವೆಟ್ನಾಯ, ಆದರ್ಶ ಕಾರಂತ್ ಸೋಮಶೇಖರ ಶೆಟ್ಟಿ ,ವೆಂಕಟೇಶ್ವರ ಭಟ್ ರೇಶ್ಮಾಹೆಗ್ಡೆ ಡಾ.ಎಂ.ಎಂ.ದಯಾಕರ್ ಇವರುಗಳು
ಜು.2ರಂದು ಉಜಿರೆಯ ಕೃಷ್ಟಾನುಗ್ರಹ ಸಭಾಂಗಣದಲ್ಲಿ ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ರೊ.ಯಶಸ್ವಿ ಸೋಮಶೇಖರ್, ಸಹಾಯಕ ಗವರ್ನರ್ ರೊ. ಡಾ. ಶಶಿಧರ ಡೋಂಗ್ರೆ ಹಾಗೂ ವಲಯ ಸೇನಾನಿ ರೊ.ಬೇಬಿ ಕುಂದರ್ ಅವರ ಉಪಸ್ಥಿತಿಯಲ್ಲಿ ಅಧಿಕಾರವನ್ನು ವಹಿಸಲಿದ್ದಾರೆ ಎಂದರು.
ಸೇವಾ ಕಾರ್ಯಕ್ರಮಗಳು: ಬೆಳ್ತಂಗಡಿ ರೋಟರಿಯು ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಸರ ಸಂವರ್ಧನಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು ಹೀಗೆ ವಿವಿಧ ಆಯಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ.
“Create lasting impact ” ಅಂದರೆ ಶಾಶ್ವತ ಬದಲಾವಣೆಗೆ ನಾಂದಿ ಹಾಡೋಣ” ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಜನಪರ ಕಾರ್ಯಕ್ರಮಗಳನ್ನುಆಯೋಜಿಸಲಿದ್ದೇವೆ.
ನಮ್ಮ ಜಿಲ್ಲಾ ಗವರ್ನರ್ ಅವರ ಕಲ್ಪನೆಯಂತೆ, ರೋಟರಿ ಬೆಂಗಳೂರು ಇಂದಿರಾನಗರ ಹಾಗೂ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕಿನ ಅಂಗನವಾಡಿಗಳ ಹಾಗೂ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ , ಶಾಲೆಗಳಿಗೆ ಕಲಿಕಾ ಉಪಕರಣಗಳ ಕೊಡುಗೆ, ಶಾಲೆಗಳಗೆ ಸೋಲಾರ್ ವಿದ್ಯುದ್ದೀಕರಣ ಅಳವಡಿಸಲಿದ್ದೇವೆ.
ಪರಿಸರ ಜಾಗೃತಿ ಹಾಗೂ ಸಂವರ್ಧನೆಯ ನಿಟ್ಟಿನಲ್ಲಿ ವನಮಹೋತ್ಸವ ಮತ್ತು ಜಾಗೃತಿಗಾಗಿ ಮಳೆನಡಿಗೆಯನ್ನು ಜುಲೈ ತಿಂಗಳಿನಲ್ಲಿ ಅಯೋಜಿಸಲಾಗಿದೆ. ಸಮುದಾಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದ್ದೇವೆ. ತಾಲೂಕಿನ ಶಾಲಾ ಶಿಕ್ಷಕರ ಕೌಶಲ್ಯವರ್ಧನೆಗಾಗಿ ತರಬೇತಿ ಶಿಬಿರದ ಯೋಜನೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸಿಸ್ಟೆಂಟ್ ಗವರ್ನರ್ ಡಾ.ಶಶಿಧರ ಡೋಂಗ್ರೆ, ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ ಉಪಸ್ಥಿತರಿದ್ದರು .













