ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ(ಸ್ವಾಯತ್ತ) ಕಾಲೇಜಿನಲ್ಲಿ ಜು.06ರಂದು ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರದ 2026-27 ನೇ ಸಾಲಿನ ತಿಂಗಳ ತಿರುಳು ಕಾರ್ಯಕ್ರಮದ ಉದ್ಘಾಟನೆ ವೈಭವದಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ್ ಪಿ. ವಹಿಸಿ, ಹೊಸ ಯಕ್ಷಗಾನ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿ, “ನಮ್ಮ ಕಾಲೇಜಿನ ಅಧ್ಯಕ್ಷರ ಪ್ರಧಾನ ದೃಷ್ಟಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಮೌಲ್ಯಾಧಾರಿತ ಶಿಕ್ಷಣ ಒದಗಿಸುವುದಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಹಪಾಠ್ಯ ಚಟುವಟಿಕೆಗಳಿಗೂ ಇಲ್ಲಿ ಅವಕಾಶಗಳಿವೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು,” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕಲಾ ಕೇಂದ್ರದ ಮಾತೃಕೆ ಸೋನಿಯಾ ಯಶೋವರ್ಮ ಅವರು ಮಾತನಾಡಿ, “ನೀವು ಬೆಳಗಿಸುವ ದೀಪವು ನಿಮ್ಮ ಜೀವನಕ್ಕೂ ಈ ಕಲಾ ಕೇಂದ್ರಕ್ಕೂ ಪ್ರಕಾಶವನ್ನು ತಂದುಕೊಡಲಿ. ನೀವು ಕಲೆಯನ್ನು ಅಪ್ಪಿಕೊಂಡರೆ, ಕಾಲೇಜಿನಲ್ಲಿ ಓದುವ ವಿಷಯಗಳು ಸುಲಭವಾಗಿ ಅರ್ಥವಾಗುತ್ತವೆ ಮತ್ತು ಏಕಾಗ್ರತೆ ಹೆಚ್ಚುತ್ತದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡುವೆಟ್ನಾಯ ನೆರವೇರಿಸಿ “ಯಕ್ಷಗಾನ ಒಬ್ಬರ ಕಲೆಯಲ್ಲ; ಅದು ಸಮೂಹಕಲೆ. ಕರ್ನಾಟಕದ ಪುರುಷಾರ್ಥದ ಕಲೆ ಯಕ್ಷಗಾನವನ್ನು ಕಲಿಯಬೇಕು ಮತ್ತು ಪ್ರಸಾರ ಮಾಡಬೇಕು. ನಿಷ್ಠೆ, ಪ್ರೀತಿ ಹಾಗೂ ಭಕ್ತಿಯಿಂದ ಈ ಕಲೆಯನ್ನು ಅಭ್ಯಾಸ ಮಾಡಿದಾಗ ಮಾತ್ರ ಅದನ್ನು ನಿಜವಾಗಿ ಒಳಗೊಳ್ಳಲು ಸಾಧ್ಯ,” ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೂಷಿತ ಯಕ್ಷಗಾನ ಮಂಡಳಿ ಪ್ರಧಾನ ಪ್ರಬಂಧಕ ಗಿರೀಶ್ ಹೆಗ್ಡೆ ಮಾತನಾಡಿ ಹೆಗ್ಗಡೆಯವರು ಆಸಕ್ತರಿಗೆ ಯಕ್ಷಗಾನ ಕಲಿಯಲು ಧರ್ಮಸ್ಥಳದಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನು 1972ರಲ್ಲಿ ಪ್ರಾರಂಭ ಮಾಡಿದರು. ಇದರಲ್ಲಿ ಕೆ. ಗೋವಿಂದ ಭಟ್, ಕೋಳ್ಯೂರು ರಾಮಚಂದ್ರ ರಾವ್, ಗುರುಗಳಾಗಿದ್ದು ಹಲವು ಕಲಾವಿದರ ಸೃಷ್ಟಿಗೆ ಕಾರಣಕರ್ತರು.
ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ (ಸ್ವಾಯತ್ತ)ಕಾಲೇಜು ಕುಲಸಚಿವರು ಪ್ರೊ. ಶ್ರೀಧರ ಭಟ್, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಡಾ. ನಾಗಣ್ಣ ಡಿ.ಎ , ಸ್.ಡಿ.ಎಂ(ಸ್ವಾಯತ್ತ) ಕಲಾಕೇಂದ್ರ ಮುಖ್ಯಸ್ಥರು ತೃಪ್ತ ಕುಮಾರ್ ಜೈನ್ ಉಪಸ್ಥಿತರಿದ್ದರು.
ಅರುಣ್ ಕುಮಾರ್ ಧರ್ಮಸ್ಥಳ ಸಂಯೋಜನೆ ಮತ್ತು ನಿರ್ದೇಶನದ ಎಂ.ಕೆ.ರಮೇಶ್ ಆಚಾರ್ಯ ಪದ್ಯರಚನೆಯ ಈ ವರ್ಷದ ಕಾಲ್ಪನಿಕ ಪ್ರಸಂಗವಾದ “ಗೋಮಹಿಮಾನ” ವನ್ನು ಉದ್ಘಾಟನೆ ಮಾಡಲಾಯಿತು.
ಮನಸ್ವಿ, ಯಜ್ಞ, ಅಪೂರ್ವ, ಶ್ರದ್ಧಾ ಪ್ರಾರ್ಥಿಸಿ, ಸಹನ ನಿರೂಪಿಸಿ, ಡಾ. ನಾಗಣ್ಣ ಡಿ. ಎ ಸ್ವಾಗತಿಸಿದರು. ತೇಜಸ್ ಧನ್ಯವಾದವಿತ್ತರು.














