ಬೆಳ್ತಂಗಡಿ: ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಪಂಚ ಗ್ಯಾರಂಟಿ ಯೋಜನೆ ಸದಸ್ಯ ಕಾರ್ಯದರ್ಶಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್. ಇವರ ಉಪಸ್ಥಿತಿಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತಿಯ ಗ್ಯಾರಂಟಿ ಅನುಷ್ಟಾನ ಸಮಿತಿ ಕಛೇರಿಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೆಸ್ಕಾಂ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಉದ್ಯೋಗ ವಿನಿಮಯ ಕಛೇರಿಗಳ ಮೂಲಕ ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಮತ್ತು ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆಯನ್ನು ಪರಿಶೀಲಿಸಲಾಯಿತು.
ಸರ್ಕಾರದ ಪಂಚಯೋಜನೆಗಳ ಸವಲತ್ತುಗಳನ್ನು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿಗೊಳಿಸುವ ಕುರಿತು ಚರ್ಚಿಸಲಾಯಿತು.
ಗೃಹಲಕ್ಷ್ಮೀ ಯೋಜನೆಯಡಿ ಪ್ರಸ್ತುತ 59204 ಫಲಾನುಭವಿಗಳಿದ್ದು, ಆಗಸ್ಟ್-2023 ರಿಂದ ಏಪ್ರಿಲ್-2026 ರವರೆಗೆ 329,37,80,000/-ರೂ ಸಹಾಯಧನ ದೊರೆತಿರುವುದಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇವರು ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ 2026ರ ಮೇ ತಿಂಗಳಲ್ಲಿ 25977 ಕುಟುಂಬಗಳಿಗೆ 1,32,87,794/- ರೂ, ಬೆಳ್ತಂಗಡಿ ಉಪವಿಭಾಗದಲ್ಲಿ 2026ರ ಮೇ ತಿಂಗಳಲ್ಲಿ 45424 ಕುಟುಂಬಗಳಿಗೆ 85,56,20,351/-ರೂ ಸಹಾಯಧನ ದೊರತಿದ್ದು ತಾಲೂಕಿಗೆ ಈವರೆಗೆ 1,28,91,21,157/- ರೂ ಸಹಾಯಧನ ದೊರೆತಿರುವುದಾಗಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದರು.
ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಜೂನ್-2026ರವರೆಗೆ ತಾಲೂಕಿನಲ್ಲಿ ಒಟ್ಟು 48444 ಪಡಿತರ ಚೀಟಿಗಳಲ್ಲಿ 45922 ಪಡಿತರ ಚೀಟಿಗಳಿಗೆ ವಿತರಿಸಲಾಗಿ ಶೇಕಡಾ 94.79% ರಂತೆ 18825 ಕ್ವಿಂಟಾಲ್ ಪಡಿತರ ಅಕ್ಕಿ ವಿತರಿಸಲಾಗಿದ್ದು, ಜುಲೈ-2026ರ ಮಾಹೆಯಲ್ಲಿ ಅನ್ನಭಾಗ್ಯ ಹಾಗೂ NFSA ಅಕ್ಕಿಯನ್ನು ಒಟ್ಟಿಗೆ ವಿತರಿಸಲಾಗುವುದೆಂದು ಆಹಾರ ನಿರೀಕ್ಷಕರು ಸಭೆಗೆ ವಿವರ ನೀಡಿದರು.
ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಸುಗಳ ಮೂಲಕ 2026ರ ಜೂನ್ ತಿಂಗಳಲ್ಲಿ 740405 ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತನ್ನು ಪಡೆದಿದ್ದು, ಜೂನ್-2023 ರಿಂದ ಈವರೆಗೆ ರೂ.113,12,77,210/- ಖರ್ಚು ಭರಿಸುವುದಾಗಿ ಧರ್ಮಸ್ಥಳ ಘಟಕದ ಮೇಲ್ವಿಚಾಲಕರು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 7917 ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ 1176 ಅಭ್ಯರ್ಥಿಗಳಿಗೆ ಡಿ.ಬಿ.ಟಿ ಮೂಲಕ ಸಹಾಯಧನವನ್ನು ವಿತರಿಸಲಾಗಿದ್ದು, ಈವರೆಗೆ 3,14,64,000 ರೂ.ಗಳನ್ನು ಸರ್ಕಾರದಿಂದ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂದು ಶ್ರೀಮತಿ ಮಂಜೂಷರವರು ತಿಳಿಸಿದರು.
ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಜೋಕಿಂ ಡಿ ಸೋಜಾ, ತಾಲೂಕು ಅನುಷ್ಟಾನ ಸಮಿತಿಯ ಸದಸ್ಯರಾದ ವಂದನಾ ಕುಮಾರಿ, ಸೌಮ್ಯ ಲಾಯಿಲ, ಮೆರಿಟಾ ಪಿಂಟೋ, ವೀರಪ್ಪ ಮೊಯ್ಲಿ, ವಿಜಯ ಗೌಡ ಬೆಳಾಲು, ಶರೀಫ್ ಶಬರಬೈಲ್, ಕೆ.ನೇಮಿರಾಜ್ ಕಿಲ್ಲೂರು, ಸತೀಶ ಹೆಗ್ಡೆ, ಯತೀಶ, ಕೇಶವ ನಾಯ್ಕ, ಅಬ್ದುಲ್ ಸಲಾಂ. ಹಾಗೂ ನೋಡೆಲ್ ಅಧಿಕಾರಿಯಾದ ಹೆರಾಲ್ಡ್ ಸ್ವಿಕ್ವೇರಾ ಉಪಸ್ಥಿತರಿದ್ದರು.














