ಮಂಗಳೂರು: ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಧಾರ್ಮಿಕ ಚಟುವಟಿಕೆಗಳ ಕುರಿತು ಮಹತ್ವದ ಸಭೆಯು ಮಂಗಳೂರಿನ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ವಹಿಸಿದ್ದರು. ಶ್ರೀ ಕ್ಷೇತ್ರದಲ್ಲಿ ಬೈದರ್ಕಳ ನುಡಿಯ ಪ್ರಕಾರ ನೆರವೇರಿಸಬೇಕಾದ ವಿವಿಧ ದೇವತಾ ಕಾರ್ಯಗಳು, ಧಾರ್ಮಿಕ ಆಚರಣೆಗಳು ಹಾಗೂ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಕ್ಷೇತ್ರಾಡಳಿತ ಸಮಿತಿಯ ಸದಸ್ಯರು, ತುಳುನಾಡಿನ ಜಾನಪದ ತಜ್ಞರು, ಕೋಟಿ-ಚೆನ್ನಯ ಗರಡಿಗಳ ಪ್ರಮುಖರು ಹಾಗೂ ಪಾಡ್ದನ ವಿದ್ವಾಂಸರು ಸಮಗ್ರವಾಗಿ ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ಕೈಗೊಂಡರು.
ಸಭೆಯು ಗೆಜ್ಜೆಗಿರಿ ಕ್ಷೇತ್ರದ ಮಾರ್ಗದರ್ಶಕರು ಹಾಗೂ ಟ್ರಸ್ಟಿಗಳಾದ ಚಿತ್ತರಂಜನ್ ಕಂಕನಾಡಿ ಮತ್ತು ಕ್ಷೇತ್ರದ ತಂತ್ರಿಗಳಾದ ಶಿವಾನಂದ ಶಾಂತಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಕ್ಷೇತ್ರದ ಧಾರ್ಮಿಕ ಸಂಪ್ರದಾಯ, ಆಚರಣೆ ಹಾಗೂ ದೈವಸಂಕಲ್ಪಗಳಿಗೆ ಅನುಗುಣವಾಗಿ ಮುಂದಿನ ಎಲ್ಲ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ, ಸಂಪ್ರದಾಯಬದ್ಧವಾಗಿ ಹಾಗೂ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಹಾಗೂ ಜಯಂತ ನಡುಬೈಲ್, ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಂ, ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು, ಅಭಿವೃದ್ಧಿ ಟ್ರಸ್ಟ್ ಉಪಾಧ್ಯಕ್ಷರಾದ ಶೈಲೇಂದ್ರ ಸುವರ್ಣ ಮತ್ತು ದೀಪಕ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ವಾಸ್ತು ತಜ್ಞ ಪ್ರಮಲ್ ಕುಮಾರ್, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಉಡುಪಿ ಇದರ ಗೌರವಾಧ್ಯಕ್ಷ ದಾಮೋದರ ಕಲ್ಮಾಡಿ, ಅಧ್ಯಕ್ಷ ಸೂರ್ಯೋದಯ್ ಪೆರಂಪಳ್ಳಿ, ಕಾರ್ಯದರ್ಶಿ ಹರೀಶ್ ಕಲ್ಮಾಡಿ, ಪಾಂಗಳ ಗರಡಿಯ ಸುಧಾಕರ್, ತುಳುನಾಡಿನ ದೈವಾರಾಧನೆ ಆಚರಣೆ-ವಿಚಾರಗಳ ಅಧ್ಯಯನಕಾರ ಶೈಲು ಬಿರ್ವ ಅಗರ್ತಾಡಿ, ಕಿನ್ನಿಮಜಲು ಗರಡಿಯ ಶಶಿಧರ್ ಕಿನ್ನಿಮಜಲು, ಮಡಿಕೇರಿ ಗರಡಿಯ ಜನಾರ್ದನ ಪೂಜಾರಿ, ಕ್ಷೇತ್ರದ ಕಾನೂನು ಸಲಹೆಗಾರ ನವನೀತ್ ಹಿಂಗಾಣಿ, ಕ್ಷೇತ್ರಾಡಳಿತ ಸಮಿತಿಯ ಸದಸ್ಯರಾದ ಭಾಸ್ಕರ ಸಾಲಿಯಾನ್ (ಮುಂಬೈ), ಜಯಾನಂದ ಎಂ., ಶ್ರೀಮತಿ ಸುಜಿತ ವಿ. ಬಂಗೇರ, ಜಯವಿಕ್ರಂ ಕಲ್ಲಾಪು, ನಿತ್ಯಾನಂದ ನಾವರ, ನಾಗೇಶ್ ಬೈಕಂಪಾಡಿ, ನಾರಾಯಣ ಪೂಜಾರಿ ಮಚ್ಚಿನ, ಚಂದ್ರಶೇಖರ್ ಉಚ್ಚಿಲ್, ನವೀನ್ ಅಮೀನ್ ಶಂಕರಪುರ, ನವೀನ್ ಸುವರ್ಣ ಸಜಿಪ, ಕಮಲಾಕ್ಷ ಬೋಳಾರ, ಹರೀಶ್ ಕೆ. ಪೂಜಾರಿ, ರಾಜೇಂದ್ರ ಚಿಲಿಂಬಿ,ಕುಮಾರ್ ಇರುವೈಲ್ ಹಾಗೂ ಪ್ರಮುಖರಾದ ಜಯರಾಮ್ ಪೂಜಾರಿ ಬೆಳುವಾಯಿ, ವಿಜಯಕುಮಾರ್, ಜಗನಾಥ್ ಶಿರ್ಲಾಲು, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಶ್ರೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ, ಧಾರ್ಮಿಕ ಪರಂಪರೆಯ ಸಂರಕ್ಷಣೆ ಹಾಗೂ ಭವಿಷ್ಯದ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.















