ಉಜಿರೆಯ ಗ್ರಾಮ ಪಂಚಾಯತ್ ಹಾಲ್ ನಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಅಭಿಮಾನಿ ಬಳಗ ಬೆಳ್ತಂಗಡಿ ತಾಲೂಕು ಇವರ ನೇತೃತ್ವದಲ್ಲಿ ಜು.19ರಂದು ಆಟಿನ ನೆಂಪುಗ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಅರೆಭಾಷೆ ಅಭಿಮಾನಿ ಬಳಗದ ಅಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ವಳಂಬ್ರ ಮಾತನಾಡುತ್ತಾ ಕಳೆದ ಆರು ವರ್ಷಗಳಿಂದ ಅರೆಭಾಷೆ ಅಭಿಮಾನಿಗಳಿಂದ ಕಾರ್ಯಕ್ರಮ ನಡೆಯುತ್ತಿದ್ದು, ಬೆರಳೆಣಿಕೆಯ ಸಮೂಹ ಇದೀಗ ನೂರರ ಗಡಿ ದಾಟುತ್ತಿದೆ ಇನ್ನು ಮುಂದಿನ ದಿನಗಳಲ್ಲಿ ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಡಬೇಕಾಗಿ ವಿನಂತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಜ್ಞಾನೇಶ್ ಸುಳ್ಯ ಉದ್ಘಾಟಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಒಳ್ಳೆಯ ಪದಾಧಿಕಾರಿಗಳು ಇದ್ದಾರೆ ಇದಕ್ಕೆ ಸಂಬಂಧಪಟ್ಟು ನಮ್ಮ ಅಕಾಡೆಮಿಯಿಂದ ಎಲ್ಲ ವ್ಯವಸ್ಥೆಗಳನ್ನು ಮಾಡಲು ನಾವು ತಯಾರಿದ್ದೇವೆ ಎನ್ನುವ ಭರವಸೆಯನ್ನ ನೀಡಿದರು.

ಮುಖ್ಯ ಅತಿಥಿಯಾಗಿ ಕೊಕ್ಕಡದ ಹಳ್ಳಿಂಗೇರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದಾಮೋದರ ಅಜ್ಜಾವರ ಇವರು, ನಮ್ಮ ಹಿರಿಯರು ಅನುಭವಿಸಿದ ಆಟಿ ತಿಂಗಳ ಆಹಾರ ಪದ್ಧತಿ , ಆಚಾರ ವಿಚಾರ, ಮದ್ದಿನ ವೈಶಿಷ್ಟ್ಯ, ಬಡತನದ ಜೀವನದ ಬಗ್ಗೆ ಮಾತನಾಡಿದರು.
ರಂಗಾಯಣ ಮೈಸೂರು ಇದರ ಹಿರಿಯ ಕಲಾವಿದರಾದ ಶ್ರೀಮತಿ ದೇವಜನ ಗೀತ ಮೊಂಟಡ್ಕ ಮಾತನಾಡುತ್ತಾ ಆಟಿ ತಿಂಗಳ ಬದುಕಿನ ಬಗ್ಗೆ ಹಾಗೆಯೇ ರಂಗಭೂಮಿಯ ಬಗ್ಗೆ ಮತ್ತು ಹಾಡು, ಮಿಮಿಕ್ರಿಯ ಮೂಲಕ ಸೇರಿದ ಸಮಸ್ತರಿಗೆ ಮನೋರಂಜನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಆಟಿನ ನೆಂಪುಗ ಕಾರ್ಯಕ್ರಮಕ್ಕೆ ತಾಲೂಕಿನ ಸುಮಾರು ನೂರಕ್ಕಿಂತಲೂ ಹೆಚ್ಚು ಅಭಿಮಾನಿಗಳು ಸೇರಿ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 53ಕ್ಕಿಂತಲೂ ಹೆಚ್ಚು ತಿನಿಸುಗಳನ್ನು ತಯಾರಿ ಮಾಡಿ ತಂದಿದ್ದರು, ಇವರೆಲ್ಲರಿಗೂ ಸಮಿತಿಯ ವತಿಯಿಂದ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು. ತಿಂಡಿ ತಿನಸುಗಳನ್ನು ತಂದವರ ಪಟ್ಟಿಯನ್ನು ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ವಳಂಬ್ರ ವಾಚಿಸಿದರು. ಸಭಾ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ಪುಷ್ಪಲತಾ ಭರತ್ ಮತ್ತು ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಅರೆಭಾಷೆ ಅಭಿಮಾನಿ ಬಳಗ ಬೆಳ್ತಂಗಡಿ ಇದರ ಕಾರ್ಯದರ್ಶಿಯಾದ ಶ್ರೀಮತಿ ಉಷಾ ಲಕ್ಷ್ಮಣ ಗೌಡ ವಳಂಬ್ರ ನೆರವೇರಿಸಿ, ಜೊತೆ ಕಾರ್ಯದರ್ಶಿ ಶ್ರೀಮತಿ ಹರ್ಷಲತಾ ವಂದಿಸಿದರು. ಡಾ. ಶ್ರೀಲಾವತಿ ಧರ್ಮೇಂದ್ರ ಕುಮಾರ್ ಮತ್ತು ಶ್ರೀಮತಿ ರೇಷ್ಮಾ ಉಜಿರೆ ನಿರೂಪಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಧರ್ಮೇಂದ್ರ ಕುಮಾರ್ ಬೆಳಾಲು, ರವೀಂದ್ರನಾಥ್ ಪೇರ್ಮುದೆ, ಶ್ರೀಮತಿ ಕಮಲಾಕ್ಷಿ ಶಿವಯ್ಯಗೌಡ ದೇವಸ್ಯ, ಶ್ರೀಮತಿ ಸವಿತ ಜಯದೇವ್, ಬಿ. ಆನಂದ ಗೌಡ ಉಜಿರೆ ಹಾಗೂ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ ಬೆಳಾಲು ಸಹಕರಿಸಿದರು.















