ಬೆಳ್ತಂಗಡಿ, ಜು. 26: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಬೆಳ್ತಂಗಡಿ ತಾಲೂಕು, ಲಯನ್ಸ್ ಭವನ ಶಾಖೆಯ ಯೋಗ ಬಂಧುಗಳು ಕಾರ್ಗಿಲ್ ವಿಜಯ ದಿವಸ್ನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.ಗೀತಾ ಅಕ್ಕ ನವರ ನಿರೂಪಣೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು

ಕಾರ್ಯಕ್ರಮದಲ್ಲಿ 1999ರ ಕಾರ್ಗಿಲ್ ಯುದ್ಧದಲ್ಲಿ ದೇಶದ ಗಡಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಭಾರತೀಯ ವೀರಯೋಧರ ಶೌರ್ಯ, ತ್ಯಾಗ ಹಾಗೂ ದೇಶಪ್ರೇಮವನ್ನು ಸ್ಮರಿಸಲಾಯಿತು. ಅಮರ ವೀರಯೋಧರಿಗೆ ಎಲ್ಲರೂ ಎದ್ದು ನಿಂತು ಗೌರವ ನಮನ ಸಲ್ಲಿಸಿದರು.
ಬಳಿಕ ಯೋಗ ಬಂಧುಗಳು ದೀಪ ಪ್ರಜ್ವಲನೆ ನೆರವೇರಿಸಿದರು. ದೀಪವು ಜ್ಞಾನ, ಶೌರ್ಯ ಹಾಗೂ ಅಮರ ಹುತಾತ್ಮರ ಸ್ಮರಣೆಯ ಸಂಕೇತವಾಗಿದ್ದು, ಅದರ ಮೂಲಕ ವೀರಯೋಧರಿಗೆ ಗೌರವ ಸಲ್ಲಿಸಲಾಯಿತು. ಅನಂತರ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ರಾಷ್ಟ್ರಭಕ್ತಿ ಹಾಗೂ ದೇಶಪ್ರೇಮವನ್ನು ವ್ಯಕ್ತಪಡಿಸಲಾಯಿತು.
ಕಾರ್ಗಿಲ್ ವಿಜಯ ದಿವಸದ ಮಹತ್ವ, ಕಾರ್ಗಿಲ್ ಯುದ್ಧದ ಹಿನ್ನೆಲೆ ಹಾಗೂ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗದ ಕುರಿತು ಸಂತೋಷ್ ಎಸ್. ಅವರು ಬೋಧಿಕೆಯನ್ನು ನಡೆಸಿ, ದೇಶದ ಸುರಕ್ಷತೆಗಾಗಿ ಸೈನಿಕರು ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಸ್ಮರಿಸಿದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲ ವೀರಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು. ಬಳಿಕ ರಾಷ್ಟ್ರಗೀತೆ ಹಾಡಿ, ಸಿಹಿ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಸಮಾರೋಪ ನೀಡಲಾಯಿತು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಗಣಪತಿ ಭಟ್ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಭವನ ಶಾಖೆಯ ಯೋಗ ಬಂಧುಗಳು ಉಪಸ್ಥಿತರಿದ್ದರು.
















