ವೇಣೂರು:ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ನವಚೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆ ವೇಣೂರು ಇವರ ಸಂಯುಕ್ತ ಆಶ್ರಯದಲ್ಲಿ 17 ವರ್ಷದೊಳಗಿನ ಬಾಲಕ-ಬಾಲಕಿಯರ ಬೆಳ್ತಂಗಡಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟ ಸೋಮವಾರ ನವಚೇತನ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಪ್ರಭಾಕರ್, ಗ್ರೇಡ್-2 ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ದೇವಸ್ಯ, ಗ್ರೇಡ್-2 ಸಂಘದ ಜಿಲ್ಲಾಧ್ಯಕ್ಷ ರವಿರಾಜ್ ಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಯರಾಜ್ ಜೈನ್, ನಾರಾವಿ ವಲಯದ ಕ್ರೀಡಾ ಮೇಲ್ವಿಚಾರಕ ಲೋಕಯ್ಯ, ಬಿಐಇಆರ್ಟಿ ಜಗದೀಶ್,ಬಜಿರೆ-ಪಡ್ಡಂದಡ್ಕ-ನಿಟ್ಟಡೆ ವಲಯದ ಕ್ರೀಡಾ ಮೇಲ್ವಿಚಾರಕಿ ಆರತಿ, ಕರಾಟೆ ತರಬೇತುದಾರ ಅಶೋಕ್, ನವಚೇತನ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕಿ ಸಿಸ್ಟರ್ ಲಿಲ್ಲಿ ಗೋಮ್ಸ್, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೀರಾ ಡಿಸೋಜಾ ಹಾಗೂ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ದಿವ್ಯ ಮಹೇಶ್ ಉಪಸ್ಥಿತರಿದ್ದರು.
ತಾಲೂಕಿನ ಒಟ್ಟು 22 ಶಾಲೆಗಳ ವಿದ್ಯಾರ್ಥಿಗಳು ಪಂದ್ಯಾಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ಪಂದ್ಯಾಟದಲ್ಲಿ 82+ ವಿಭಾಗದಲ್ಲಿ ನವಚೇತನ ಶಾಲೆಯ ಶರ್ವಿನ್ ಮೋನಿಸ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಾನ್ವಿ ಎಂ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದರು.
ಇದೇ ವೇಳೆ ಬಾಲಕರ ವಿಭಾಗದಲ್ಲಿ ಸಂಚಿತ್ ಕೆ. ದ್ವಿತೀಯ ಸ್ಥಾನ, ಆತ್ಮಿಕ್ ಹಾಗೂ ಶಮಿತ್ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದರು.
ವಿಜೇತ ವಿದ್ಯಾರ್ಥಿಗಳಿಗೆ ಅತಿಥಿಗಳು ಅಭಿನಂದನೆ ಸಲ್ಲಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
















