ಬೆಳ್ತಂಗಡಿ: ತಾಲೂಕು ಬಂಟರ ಸಂಘದ ಗೌರವ ಮಾರ್ಗದರ್ಶಕರು ಹಾಗೂ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರು ತಮ್ಮ ತಾಯಿ ಕಾಶಿ ಶೆಟ್ಟಿ ಅವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಕಾಶಿ ಸದನ’ವಸತಿ ಯೋಜನೆಯ ಫಲಾನುಭವಿಗಳಿಗೆ ಧನಸಹಾಯದ ಚೆಕ್ ವಿತರಿಸಲಾಯಿತು.
ಏಪ್ರಿಲ್ 28 ರಂದು ನಡೆದ ಸರಳ ಸಮಾರಂಭದಲ್ಲಿ, ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ ಅವರು ವಿವಿಧ ವಲಯಗಳ ಫಲಾನುಭವಿಗಳಿಗೆ ಸಹಾಯಧನ ಹಸ್ತಾಂತರಿಸಿದರು.
ವೇಣೂರು ವಲಯದ ಆರಂಬೋಡಿ, ಉಜಿರೆ ವಲಯದ ಮುಂಡಾಜೆ ಹಾಗೂ ಮಡಂತ್ಯಾರು ವಲಯದ ಮಚ್ಚಿನ ಗ್ರಾಮದ ಫಲಾನುಭವಿಗಳಿಗೆ ವಸತಿ ಯೋಜನೆಯ ಮೊದಲ ಹಂತದ ತಲಾ 1 ಲಕ್ಷ ರೂಪಾಯಿಗಳ ಚೆಕ್ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಾರಾವಿ ವಲಯದ ಕೊಕ್ರಾಡಿ ಗ್ರಾಮದ ಫಲಾನುಭವಿಯೊಬ್ಬರಿಗೆ ಯೋಜನೆಯ ಎರಡನೇ ಹಂತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ ಹಾಗೂ ಕೋಶಾಧಿಕಾರಿ ವಸಂತ್ ಶೆಟ್ಟಿ ಶ್ರದ್ಧಾ ಉಪಸ್ಥಿತರಿದ್ದು, ಯೋಜನೆಯ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
















