ಉಜಿರೆ: ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಶ್ರೀ ರಾಮ ಕೃಷ್ಣ ಸಭಾ ಭವನ ದಲ್ಲಿ ‘ಗುರುಪೂರ್ಣಿಮೆ ಮಹೋತ್ಸವ’ವು ನಡೆಯಿತು.

ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿ ವಕ್ತಾರರು ರಚನಾ ರೈ ಬೆಂಗಳೂರು ಮಾತನಾಡಿ ಹಿಂದೂಗಳು ‘ಸ್ವಬೋಧ’ ಮತ್ತು ‘ಶತ್ರುಬೋಧ’ವನ್ನು ಜಾಗೃತವಾಗಿಟ್ಟುಕೊಂಡು ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಿ ಎಂದರು.
ಹಿಂದೂ ಸಮಾಜವು ತನ್ನ ‘ಸ್ವಬೋಧ’ (ಸಾಮರ್ಥ್ಯ ಮತ್ತು ಧರ್ಮಜ್ಞಾನ) ಹಾಗೂ ‘ಶತ್ರುಬೋಧ’ (ಶತ್ರುವಿನ ಗುಪ್ತ ರಣನೀತಿ)ವನ್ನು ಜಾಗೃತಗೊಳಿಸದ ಹೊರತು, ಈ ಎಲ್ಲಾ ದಿಕ್ಕುಗಳಿಂದ ಆಗುತ್ತಿರುವ ಆಘಾತಗಳನ್ನು ಪ್ರತಿರೋಧಿಸುವುದು ಅಸಾಧ್ಯ. ಆದ್ದರಿಂದ ಹಿಂದೂಗಳು ಇನ್ನು ಮುಂದೆ ಕೇವಲ ಮೂಕಪ್ರೇಕ್ಷಕರಾಗಿರದೆ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಸಕ್ರಿಯವಾಗಿ ಮುಂದಾಗಬೇಕು,’’ ಎಂದು ಹಿಂದೂ ಜನಜಾಗೃತಿ ಸಮಿತಿಯ ಸೌ. ರಚನಾ ರೈ ರವರು ಸ್ಪಷ್ಟ ಮತ್ತು ಪ್ರಖರ ವಿಚಾರಗಳನ್ನು ವ್ಯಕ್ತಪಡಿಸಿದರು.
ವಕ್ತಾರರಾದ ಅಶೋಕ್ ಶೆಟ್ಟಿ ಸರಪಾಡಿ ಯವರು ಮಾತನಾಡುತ್ತಾ ಕಲಿಯುಗದಲ್ಲಿ ಭಗವಂತನು ಯಾವುದೇ ವ್ಯಕ್ತಿಯಾಗಿ ಬಾರದೆ ಸಂಘಟನೆಯ ಮೂಲಕ ಧರ್ಮಸಂಸ್ಥಾಪನೆ ಮಾಡುವುದಾಗಿ ವಚನ ನೀಡಿದ್ದಾನೆ.’ಸಂಘ ಶಕ್ತಿ ಕಲಿಯುಗೇ’ ಎಂಬಂತೆ, ಶ್ರೀ ಪ. ಪೂ ಅಠವಲೆ ಯವರು ಶಾಂತಿ ಮಂತ್ರದ ಮೂಲಕ ರಾಮ ರಾಜ್ಯದ ನಿರ್ಮಾಣ ಮಾಡಲು ಹಿಂದೂ ಜನ ಜಾಗೃತಿ ಸಮಿತಿ ಯನ್ನು ರಚನೆ ಮಾಡಿದ್ದಾರೆ ಎಂದು ಮಾರ್ಗದರ್ಶನ ಮಾಡಿದರು.
ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆ (ಗುರುಪೂಜೆ), ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಂದೇಶ ವಾಚನ, ರಾಮರಾಜ್ಯದ ಸ್ಥಾಪನೆಗಾಗಿ ಸಂಕಲ್ಪ ಮತ್ತು ನಾಮಜಪ, ಧರ್ಮರಕ್ಷಕರು ಹಾಗೂ ಹಿಂದುತ್ವನಿಷ್ಠರ ಸತ್ಕಾರ, ರಾಷ್ಟ್ರಭಕ್ತ ಮತ್ತು ಧರ್ಮನಿಷ್ಠ ಗಣ್ಯರ ಮಾರ್ಗದರ್ಶನ, ಸ್ವರಕ್ಷಣೆಯ ಸುಲಭ ಪದ್ಧತಿಗಳ ಪ್ರತ್ಯಕ್ಷ ಪ್ರದರ್ಶನ (ಡೆಮೋ), ಹಾಗೂ ‘ಸಮಿತಿ’ಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯವನ್ನಾಧರಿಸಿದ ಕಿರುಚಿತ್ರ (ಡಾಕ್ಯುಮೆಂಟರಿ) ಪ್ರದರ್ಶಿಸಲಾಯಿತು.












