ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸಹ ಪಠ್ಯ ಚಟುವಟಿಕೆಯಾದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಈ ವರ್ಷದ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜುಲೈ 29 ರಂದು ನಡೆಯಿತು.
ಎಸ್. ಡಿ. ಎಂ. ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಬೆಳ್ತಂಗಡಿಯ ವಾಣಿ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷಿತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭೌತ ಶಾಸ್ತ್ರವು ನಮ್ಮ ದಿನ ನಿತ್ಯದ ಒಂದು ಭಾಗವಾಗಿದೆ. ವಿಷಯವನ್ನು ಬಾಯಿಪಾಠ ಮಾಡಿ ಬರೆಯುವ ಬದಲು, ವಿಷಯವನ್ನು ಅರ್ಥಮಾಡಿ ಕೊಂಡು ಬರೆದಾಗ, ಅಂಕಕ್ಕಿಂತ ಮಿಗಿಲಾಗಿ ವಿಷಯದ ಸ್ಪಷ್ಟತೆ ಮತ್ತು ಆ ವಿಷಯದ ಆಳ, ಅದರ ವ್ಯಾಪ್ತಿಯ ಬಗ್ಗೆ ನಮ್ಮ ಜ್ಞಾನ ಬೆಳೆಯುತ್ತದೆ ಅದರ ಮೂಲಕ ನಾವು ಸಮಾಜಕ್ಕೆ ನಮ್ಮದೇ ಕೊಡುಗೆ ನೀಡಬಹುದು ಎಂದರು. ಪ್ರಶ್ನೆಗಳನ್ನು ಕೇಳುವ, ಮತ್ತು ಅದಕ್ಕೆ ಉತ್ತರ ಹುಡುಕುವ ನಿರಂತರ ಪ್ರಯತ್ನಗಳೇ ನಮ್ಮಲ್ಲಿ ಜ್ಞಾನದ ಕುತೂಹಲದ ಬಗ್ಗೆ ಮತ್ತು ಏನಾದರೊಂದು ಹೊಸತನವನ್ನು ಸಾಧಿಸಲು ಸಹಾಯಕವಾಗುತ್ತದೆ. ಭೌತ ಶಾಸ್ತ್ರವು ಪ್ರಕೃತಿಯ ಭಾವನೆಯಾದರೆ, ಗಣಿತ ಶಾಸ್ತ್ರವು ಆ ಭಾವನೆಯನ್ನು ವ್ಯಕ್ತ ಪಡಿಸುವ ಸುಂದರ ಭಾಷೆ, ನಮ್ಮಲ್ಲಿ ನಡೆಯುವ ಪ್ರತಿಯೊಂದನ್ನೂ ಕ್ರಿಯೆಯನ್ನೂ ಬಹಳ ಕುತೂಹಲದಿಂದ ಮತ್ತು ಸೂಕ್ಷ್ಮವಾಗಿ ನೋಡುವ ಅಭ್ಯಾಸ ಮಾಡಿದಾಗ ಮಾತ್ರ ಭೌತ ಶಾಸ್ತ್ರದ ಅರಿವು ಬಹಳ ಸುಲಭ ವಾಗುತ್ತದೆ.ಕೇವಲ ವೈದ್ಯಕೀಯ, ತಾಂತ್ರಿಕ ಶಿಕ್ಷಣಗಳಷ್ಟೇ ಉನ್ನತ ಶಿಕ್ಷಣ ಗಳಲ್ಲ, ಅಥವಾ ಅವುಗಳಿಗಷ್ಟೇ ಉತ್ತಮ ಭವಿಷ್ಯವಿದೆ ಎಂಬ ಮನಸ್ಥಿತಿ ಬೇಡ. ಮೂಲ ವಿಜ್ಞಾನ ದಲ್ಲಿಯೂ ಬಹಳಷ್ಟು ಅವಕಾಶಗಳಿದ್ದು ನೀವು ಸಂಶೋಧನಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ನಡೆಸಿದರೆ ಬಹಳ ಉನ್ನತ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ವಿದ್ಯಾರ್ಜನೆ ಹಂತದಲ್ಲಿ ಇದ್ದಾಗಲೇ ಶ್ರಮ ವಹಿಸಿದರೆ, ನಿಮ್ಮ ಶ್ರಮ ನಿಮ್ಮ ಭವಿಷ್ಯದ ಸುಖ ಜೀವನದ ಕೆಂಪು ಹಾಸಿಗೆಯಾಗಿ ಬದಲಾಗುತ್ತದೆ ಎಂದು ನುಡಿದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ, ಮಾತನಾಡಿ ಇವತ್ತು ವಿದ್ಯಾರ್ಥಿಗಳಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಹತ್ತು-ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿದ್ದು ಅದಕ್ಕೆ ಬೇಕಾದ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಪ್ರಯತ್ನಿಸಿದಾಗ ಮಾತ್ರ ನೀವು ಅಂದುಕೊಂಡ ಗುರಿ ಮತ್ತು ಕ್ಷೆತ್ರ ದಲ್ಲಿ ಸಾಧಿಸಬಹುದು ಎಂದು ನುಡಿದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಈ ವರ್ಷದ ಸ್ಪೆಕ್ಟ್ರಾ ಅಸೋಸಿಯೇಷನ್ ನ ನೂತನ ಪದಾಧಿಕಾರಿಗಳಾಗಿ ಚುನಾಯಿತರಾದ ಪದಾಧಿಕಾರಿಗಳಿಗೆ ಹೂ ಕೊಟ್ಟು ಅವರನ್ನು ಅಸೋಸಿಯೇಷನ್ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಹುರಿದುಂಬಿಸಲಾಯಿತು.
ವೇದಿಕೆಯ ಮೇಲೆ ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್ ಸಿ ಹೆಚ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಭಾಗದ ಉಪನ್ಯಾಸಕರುಗಳು ಮತ್ತು ಸ್ಪೆಕ್ಟ್ರಾ ಅಸೋಸಿಯೇಷನ್ ನ ಸದಸ್ಯರು ಉಪಸ್ಥಿತರಿದ್ದರು.
ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್ ಅಸೋಸಿಯೇಷನ್ ಕುರಿತು ಪ್ರಾಸ್ಥಾವಿಕ ಮಾತನಾಡಿ ಅಭ್ಯಾಗತರನ್ನು ಸಭೆಗೆ ಪರಿಚಯಿಸಿದರೆ, ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಾದ ಪರ್ವತರಾಜ್ ವಂದಿಸಿದರೆ, ಸೃಷ್ಟಿ ರಾಜ್ ಕಾರ್ಯಕ್ರಮ ನಿರೂಪಿಸಿದರು.












