ಬೆಳ್ತಂಗಡಿ: ಸ.ಹಿಪ್ರಾ.ಶಾಲೆ ಪೆರ್ಲ ಬೈಪಾಡಿಯ ಮುಖ್ಯಶಿಕ್ಷಕಿ ಶ್ರೀಮತಿ ಜಯಶ್ರೀ ಕೆ. ಇವರು ಜು.31ರಂದು ಸೇವೆಯಿಂದ ವಯೋ ನಿವೃತ್ತರಾಗಿದ್ದಾರೆ.
ಇವರು ಶಿಕ್ಷಣ ಕ್ಷೇತ್ರದಲ್ಲಿ 1994ರಿಂದ 1998ರ ವರೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿ 4 ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ, 1998ರಿಂದ 2007ರ ವರೆಗೆ ಕುಂಟಾಲಪಲ್ಕೆ ಶಾಲೆಯಲ್ಲಿ9 ವರ್ಷಗಳ ಕಾಲ ಪ್ರಭಾರ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದು, 2007ರಿಂದ 2026 ಮೇ ವರೆಗೆ ಸರಕಾರಿ ಹಿರಿಯ ಪ್ರಾಥಮಿ ಶಾಲೆ ಬಜಿಲದಲ್ಲಿ 19 ವರ್ಷಗಳ ಕಾಲ ಪ್ರಭಾರ ಮುಖ್ಯಶಿಕ್ಷಕಿಯಾಗಿ ಸೇವೆಸಲ್ಲಿಸಿದ್ದಾರೆ.
2026 ಮೇ 6 ರಿಂದ ಜುಲೈ 31 ರ ವರೆಗೆ ಸ.ಹಿ.ಪ್ರಾ.ಶಾಲೆ ಪೆರ್ಲ ಬೈಪಾಡಿಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಒಟ್ಟು 32 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ್ದಾರೆ. ಪ್ರಥಮವಾಗಿ ಇವರು ಪೆರ್ಲ ಬೈಪಾಡಿ ಅಂಗನವಾಡಿ ಕಾರ್ಯಕರ್ತೆಯಾಗಿಯೂ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇವರು ಮೂಲತಃ ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ದಿ. ದೇವಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ. ಹಿರೆಬಂಡಾಡಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಉಪ್ಪಿನಂಗಡಿಯಲ್ಲಿ ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪಡೆದು, ಸರ್ವೋದಯ ವಿದ್ಯಾಲಯ ವಿರಾಜಪೇಟೆ ಕೊಡಗು ಜಿಲ್ಲೆಯಲ್ಲಿ ಟಿ.ಸಿ.ಎಚ್. ತರಬೇತಿಯನ್ನು ಉತ್ತಮ ಶ್ರೇಣಿಯಲ್ಲಿ ಪಡೆದಿದ್ದಾರೆ.
ಇವರು ಬಂದಾರು ಗ್ರಾಮದ ಪೆರ್ಲ ಬೈಪಾಡಿ ಸೋಣಕುಮೇರು ಎಂಬಲ್ಲಿ ಪತಿ ಹೊನ್ನಪ್ಪ ಗೌಡ ಎಸ್. ಪುತ್ರ ಲೋಹಿತ್ ಕುಮಾರ್ ಜೆ.ಹೆಚ್, ಪುತ್ರಿ ಗೀತಪ್ರಿಯಾ ಹಾಗೂ ಸೊಸೆ ಅಳಿಯರೊಂದಿಗೆ ಸುಖೀ ಜೀವನನಡೆಸುತ್ತಿದ್ದಾರೆ.












