ಬೆಳ್ತಂಗಡಿ: ಇಂದು ಸುರಿದ ಧಾರಾಕಾರ ಮಳೆಗೆ ಬೆಳ್ತಂಗಡಿ ತಾಲೂಕಿನ ಲಾಯಿಲ, ನಡ, ನಾವೂರು, ಇಂದಬೆಟ್ಟು, ಕೊಲ್ಲಿ ಮಾರ್ಗದಲ್ಲಿ ರಸ್ತೆಯ ಮೇಲೆ ನೀರು ಹರಿದು ಜನಜೀವನ ಅಸ್ತವ್ಯಸ್ತವಾಗಿದೆ.
ಮೇಲಿಂದ ಹರಿದು ಬಂದ ಮಳೆ ನೀರು ರಸ್ತೆಯ ಮೇಲೆ ಕೆಸರು ಮಿಶ್ರಿತ ನೀರಾಗಿ ಹರಿಯುತ್ತಿದೆ. ಇದರಿಂದ ದ್ವಿಚಕ್ರ, ನಾಲ್ಕು ಚಕ್ರ ವಾಹನ ಸವಾರರು ಪರದಾಡುವಂತಾಯಿತು. ಬಸ್ಗಳು ಸಹ ನೀರಿನಲ್ಲಿ ನಿಧಾನವಾಗಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ರಸ್ತೆಯಲ್ಲಿ ಹರಿದ ನೀರು ನೇರವಾಗಿ ಮನೆಗಳ ಅಂಗಳಕ್ಕೆ ನುಗ್ಗಿದೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಮಳೆ ಮುಂದುವರಿದರೆ ಮನೆಗಳಿಗೆ ನೀರು ನುಗ್ಗುವ ಭಯವೂ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.













