ಕಲ್ಮಂಜ : ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಮುಂಬರುವ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಭಗವದ್ಭಕ್ತರ ಸಭೆಯು ಆ 2ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ ಗುರಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಜಾತ್ರಾ ಮಹೋತ್ಸವದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಪ್ರಧಾನ ಸಂಚಾಲಕ ಪಾಂಡುರಂಗ ಮರಾಟೆ, ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಕೊಡೆಕ್ಕಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಯಶೋಧರ ಗೌಡ, ಪ್ರಸಾದ್ ಕುಮಾರ್, ನಾಗೇಶ್ ಎಂ., ಶ್ರೀಮತಿ ಕೇಶವತಿ, ದೇವಸ್ಥಾನದ ಅರ್ಚಕ ಚಂದ್ರಹಾಸ ಪಟವರ್ಧನ್, ಊರಿನ ಹಿರಿಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.
ಸಭೆಯಲ್ಲಿ ಈ ವರ್ಷದ ಜಾತ್ರಾ ಮಹೋತ್ಸವದ ಜಮಾ-ಖರ್ಚಿನ ವಿವರವನ್ನು ಮಂಡಿಸಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಯಿತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ದೋಷಗಳು ಹಾಗೂ ಅವುಗಳಿಗೆ ಕೈಗೊಳ್ಳಬೇಕಾದ ಶಾಸ್ತ್ರೋಕ್ತ ಪರಿಹಾರ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಲಾಯಿತು.
ದೇವಸ್ಥಾನದ ಸಮಗ್ರ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳ ವಿಸ್ತರಣೆ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಭಗವದ್ಭಕ್ತರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಸಭೆಯ ಆರಂಭದಲ್ಲಿ ಅಧ್ಯಕ್ಷ ಗುರುರಾಜ ಗುರಿಪಳ್ಳ ಸ್ವಾಗತಿಸಿದರು. ಸಮಾರೋಪದಲ್ಲಿ ಸಮಿತಿ ಸದಸ್ಯ ಯಶೋಧರ ಗೌಡ ವಂದನಾರ್ಪಣೆ ಸಲ್ಲಿಸಿದರು.













