ಬೆಳ್ತಂಗಡಿ : ಬೆಂಗಳೂರಿನ ವ್ಯಾಸರಾಜ ಮಠದ (ಸೋಸಲೆ) ಪೂಜ್ಯ ಶ್ರೀ ಶ್ರೀ ೧೦೦೮ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಬುಧವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಪೂಜ್ಯ ಸ್ವಾಮೀಜಿವರು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಕ್ಷೇತ್ರದ ಪರವಾಗಿ ಡಿ. ಹರ್ಷೇಂದ್ರ ಕುಮಾರ್ ಪೂಜ್ಯ ಸ್ವಾಮೀಜಿಯವರನ್ನು ಭಕ್ತಿಪೂರ್ವಕ ಸ್ವಾಗತಿಸಿದರು. ಬಳಿಕ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಲಾಯಿತು. ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಬಳಿಕ ಸಂಪ್ರದಾಯದಂತೆ ಪೂಜ್ಯ ಸ್ವಾಮೀಜಿಯವರನ್ನು ಹೆಗ್ಗಡೆಯವರ ನಿವಾಸ (ಬೀಡು) ಕ್ಕೆ ಗೌರವಪೂರ್ವಕ ಕರೆತಂದು ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಪೂಜ್ಯ ಸ್ವಾಮೀಜಿಯವರಿಗೆ ಗೌರವಾರ್ಪಣೆ ಮಾಡಿದರು.
ಧರ್ಮಸ್ಥಳದ ಚತುರ್ವಿಧ ದಾನಪರಂಪರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆಗಳಿಗೆ ಕಾಯಕಲ್ಪ, ಸ್ವ-ಉದ್ಯೋಗ ತರಬೇತಿ ಕೇಂದ್ರಗಳು, ಮಹಿಳಾಸಬಲೀಕರಣ ಮೊದಲಾದ ಬಹುಮುಖಿ ಸೇವಾಕಾರ್ಯಗಳ ಬಗ್ಗೆ ಡಿ. ಹರ್ಷೇಂದ್ರ ಕುಮಾರ್ ಪೂಜ್ಯ ಸ್ವಾಮೀಜಿಯವರಿಗೆ ಮಾಹಿತಿ ನೀಡಿದರು.
ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಮಾಡುತ್ತಿರುವ ಲೋಕಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪೂಜ್ಯ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು,ದೇವಳ ಪಾರುಪತ್ಯಗಾರ್ ಲಕ್ಷ್ಮೀನಾರಾಯಣ ರಾವ್, ಮಣೆಗಾರ್ ವಸಂತ ಭಟ್ ಮತ್ತು ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.













