ಬೆಳ್ತಂಗಡಿ: ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆಯಲ್ಲಿ ಅಜ್ಜ–ಅಜ್ಜಿಯವರೊಂದಿಗೆ ಸಮಾಗಮ ಕಾರ್ಯಕ್ರಮ ಆ.11ರಂದು ನಡೆಯಿತು.
ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಅಜ್ಜ–ಅಜ್ಜಿಯವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹಿರಿಯರ ಅನುಭವ, ಪ್ರೀತಿ ಮತ್ತು ಮಾರ್ಗದರ್ಶನ ಮಕ್ಕಳಿಗೆ ಅಮೂಲ್ಯವಾದ ಜೀವನ ಪಾಠಗಳನ್ನು ಕಲಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಉಜಿರೆಯ ಜನಾರ್ಧನ್ ಮತ್ತು ವೇದಾವತಿ ದಂಪತಿ ಭಾಗವಹಿಸಿ, ಅಜ್ಜ–ಅಜ್ಜಿಯವರ ಮಹತ್ವ, ಮಕ್ಕಳ ಜೀವನದಲ್ಲಿ ಅವರ ಪ್ರೀತಿ ಹಾಗೂ ಮಾರ್ಗದರ್ಶನದ ಪಾತ್ರದ ಕುರಿತು ಮಾತನಾಡಿದರು. ಶುಭಲತಾ ಹಾಗೂ ಸತೀಶ್ ಕುಮಾರ್ ಜೈನ್ ಬೊಳ್ಳೂರುಗುತ್ತು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ನಡೆಯಿತು. ಅಜ್ಜ–ಅಜ್ಜಿಯವರ ಪ್ರೀತಿ, ಕಾಳಜಿ ಮತ್ತು ಮಕ್ಕಳ ಜೀವನದಲ್ಲಿ ಅವರ ಮಹತ್ವದ ಕುರಿತು ವಿದ್ಯಾರ್ಥಿಗಳು ಭಾಷಣ ಮಾಡಿದರು. ಬಳಿಕ ವಿದ್ಯಾರ್ಥಿಗಳು ತಮ್ಮ ಅಜ್ಜ–ಅಜ್ಜಿಯವರೊಂದಿಗೆ ಆತ್ಮೀಯವಾಗಿ ಸಮಯ ಕಳೆಯುವ ಮೂಲಕ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದರು.
ಎಕ್ಸೆಲ್ ಟೆಕ್ನೋ ಸ್ಕೂಲ್ನ ಪ್ರಾಂಶುಪಾಲರಾದ ಸುಮಿತ್ರ ಸ್ವಾಗತಿಸಿದರು. ಶಿಕ್ಷಕ ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಶಿಕ್ಷಕರು ಮತ್ತು ಪೋಷಕರು ಸಹಕರಿಸಿದರು.













