ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸುವ ತಿಂಗಳ ತಿರುಳು ಅತಿಥಿ ಉಪನ್ಯಾಸ “ಯಕ್ಷಗಾನದಲ್ಲಿ ಮಹಿಳೆಯರ ಸಮಾನತೆ” ಕಾರ್ಯಕ್ರಮ ವೈಭವದಿಂದ ನಡೆಯಿತು.
ಅಧ್ಯಕ್ಷತೆಯನ್ನು ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಡಾ. ನಾಗಣ್ಣ ಡಿ.ಎ ವಹಿಸಿದರು.
ಮುಖ್ಯ ಅತಿಥಿಯಾಗಿ ಪ್ರಸಿದ್ಧ ಯಕ್ಷಗಾನ ಸಂಘಟಕರು ಮತ್ತು ಮಹಿಳಾ ಕಲಾವಿದೆ ಶ್ರೀಮತಿ ವಿದ್ಯಾ ಕೋಳ್ಯೂರು ಮಾತನಾಡಿ “ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ್ದರಲ್ಲಿ ಯಕ್ಷಗಾನ ಮತ್ತು ಯಕ್ಷಗಾನ ಕಲಾವಿದರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು. ಯಕ್ಷಗಾನವು ಕೇವಲ ಒಂದು ಕಲಾ ಪ್ರಕಾರವಲ್ಲ, ಅದು ಜೀವನ ಪಾಠವನ್ನು ಕಲಿಸುವ ವಿಶ್ವವಿದ್ಯಾಲಯದಂತಿದೆ ಎಂದು ಅಭಿಪ್ರಾಯಪಟ್ಟರು.
“ಬದುಕಿನಲ್ಲಿ ಸಿಹಿ-ಕಹಿ, ಏರು-ಪೇರುಗಳು ಸಹಜ. ಅಂತಹ ಸಂದರ್ಭಗಳನ್ನು ಎದುರಿಸಿ ನಿಯಂತ್ರಿಸುವ ಶಕ್ತಿ ಯಕ್ಷಗಾನಕ್ಕೆ ಇದೆ. ವೇದಿಕೆಯ ಮೇಲೆ ಬರುವ ಪ್ರತಿಯೊಂದು ಪಾತ್ರವೂ ನಮಗೆ ಒಂದು ಸಂದೇಶ ನೀಡುತ್ತದೆ” ಎಂದು ಅವರು ವಿವರಿಸಿದರು.
ಸಮಾಜದಲ್ಲಿ ಇರುವ ಗಂಡು-ಹೆಣ್ಣು ಭೇದವನ್ನು ತೊಡೆದುಹಾಕಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಯಕ್ಷಗಾನ ಸಾರುತ್ತದೆ. ಕಲಾವಿದನಿಗೆ ಸಾಧನೆ, ಶ್ರದ್ಧೆ ಮತ್ತು ಸಮಯ ಪ್ರಜ್ಞೆ ಅತ್ಯಗತ್ಯ. “ಕಲೆ ನಮ್ಮೊಳಗೆ ಬಂದರೆ ನಾವು ಎಂದಿಗೂ ಒಂಟಿಯಾಗುವುದಿಲ್ಲ” ಎಂದು ಹೇಳಿದ ಅವರು, ಯಕ್ಷಗಾನವನ್ನು ಮಾದರಿಯಾಗಿ ಇಟ್ಟುಕೊಂಡರೆ ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ “ಬದುಕಿನಲ್ಲಿ ಸಮಸ್ಯೆಗಳು ಬಂದಾಗ ಅವುಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಯಕ್ಷಗಾನ ನೀಡುತ್ತದೆ” ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮ, ರಕ್ಷಾ ಪೂರನ್ ವರ್ಮ, ಎಸ್.ಡಿ.ಎಂ ಕಲಾಕೇಂದ್ರ ಮುಖ್ಯಸ್ಥ ತೃಪ್ತ ಕುಮಾರ್ ಜೈನ್ , ಯಕ್ಷಗಾನ ತರಬೇತುದಾರ ಅರುಣ್ ಕುಮಾರ್ ಧರ್ಮಸ್ಥಳ , ನೃತ್ಯ ತರಬೇತುದಾರರು ವಿದುಷಿ ಚೈತ್ರ ಭಟ್ , ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಮಾನವ ಸಂಪನ್ಮೂಲ ವ್ಯವಸ್ಥಾಪಕ ಪುನೀತ್ , ಸಂಸ್ಕೃತ ಉಪನ್ಯಾಸಕ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು.
ಸಹನ, ತೇಜಸ್ ಸಂಯೋಜಿಸಿದರು. ಸಾಕ್ಷ, ಹರ್ಷಿಣಿ, ಯಜ್ಞ, ಪವಿತ್ರ ಪ್ರಾರ್ಥಿಸಿ, ಮನಸ್ವಿ ನಿರೂಪಿಸಿ, ಸಹನ ಅತಿಥಿ ಪರಿಚಯ ಮಾಡಿದರು. ಅನನ್ಯ ಸ್ವಾಗತಿಸಿ, ಅರುಣ್ ಕುಮಾರ್ ಧರ್ಮಸ್ಥಳ ಧನ್ಯವಾದವಿತ್ತರು.













