ಬೆಳ್ತಂಗಡಿ: ಶಿಶಿಲ ಗ್ರಾಮದ ಹೇವಾಜೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಅಡುಗೆ ಸಿಬ್ಬಂದಿ ಸರೋಜಾ ನಾಯ್ಕ ಇವರಿಗೆ ಗೌರವ ಸನ್ಮಾನವನ್ನು ನೀಡಲಾಯಿತು.
ಸರಿ ಸುಮಾರು 22 ವರ್ಷಗಳ, ಅವರ ಪ್ರಾಮಾಣಿಕ ಹಾಗೂ ಪ್ರೀತಿಪೂರ್ವಕ ಸೇವೆ ಅವಿಸ್ಮರಣೀಯ. ಮಿತಭಾಷಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಸರೋಜಾರವರು, ಶಾಲೆಯ ಪುಟ್ಟ ಮಕ್ಕಳ ಬಾಯಲ್ಲಿ “ಸರೋಜತ್ತೆ”ಯಾಗಿ ಕರೆಯಲ್ಪಟ್ಟು ಸಂತಸಪಟ್ಟವರು. ಅಚ್ಚುಕಟ್ಟಾದ ಅಡುಗೆಮನೆ ನಿರ್ವಹಣೆ, ಶುಚಿ ರುಚಿಯಾದ ಅಡುಗೆ ತಯಾರಿಯಿಂದ ಮಕ್ಕಳು ಹಾಗೂ ಪೋಷಕರಿಗೆ ಆಪ್ತರಾಗಿದ್ದರು. ಒಂದೇ ಮನೆಯ ಸಹ ಸದಸ್ಯರಂತೆ, ಶಿಕ್ಷಕರೊಂದಿಗಿನ ಅವರ ಬಾಂಧವ್ಯ ಕೂಡ ಪ್ರಶಂಸನಾರ್ಹವೇ ಸರಿ. ಸರೋಜಾರವರ ಉತ್ತಮ ಕಾರ್ಯವೈಖರಿಯಿಂದ ಶಿಕ್ಷಣ ಇಲಾಖೆ ಹಾಗೂ ಬಿಸಿ ಊಟ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಸ್ವಚ್ಛತೆ, ಕೆಲಸ ಹಾಗೂ ಮಕ್ಕಳೆಂದರೆ ಇನ್ನಿಲ್ಲದ ಉತ್ಸಾಹದಿಂದಿದ್ದ ಸರೋಜಾ ಅವರು ದುರದೃಷ್ಟವಶಾತ್ ಕಾಲು ಜಾರಿ ಬಿದ್ದು, ಸೊಂಟದ ಭಾಗದಲ್ಲಿ ತೀವ್ರವಾದ ಪೆಟ್ಟಾಗಿದ್ದು 3 ವರ್ಷಗಳಿಂದ ಹೋರಾಡುತ್ತಿದ್ದಾರೆ. ಮೊದಲಿಗೆ ಸೊಂಟ ನೋವು ಕಾಣಿಸಿಕೊಂಡು, ದಿನಕಳೆದಂತೆ ನರ ಸಂಬಂಧಿ ತೊಂದರೆಗಳು ಕಾಣಿಸಿಕೊಂಡವು. ಪ್ರಸ್ತುತ ಮಂಗಳೂರಿನ KMC ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕವಾಗಿ ಮಾನಸಿಕವಾಗಿ ದೈಹಿಕವಾಗಿ ವಿಚಲಿತರಾಗಿದ್ದಾರೆ.
ಗ್ರಾಮಸ್ಥರು, ಹಳೆವಿದ್ಯಾರ್ಥಿಗಳು , ಶಾಲಾ ಪೋಷಕರು, ಸಿಬ್ಬಂದಿಗಳು ಸೇರಿದಂತೆ, ಮಕ್ಕಳ ಪೋಷಕರು ಸಂಗ್ರಹಿಸಿದ ಸಣ್ಣ ಮೊತ್ತವನ್ನು ಅವರ ಮನೆಯಲ್ಲೇ ಅವರಿಗೆ ಹಸ್ತಾಂತರಿಸಲಾಯಿತು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಮುಖ್ಯೋಪಾಧ್ಯಾಯರು, ಸಿಬ್ಬಂದಿಗಳು ಹಾಗೂ ಪೋಷಕರು, ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.












