ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ತಾಂತ್ರಿಕ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ವಿಜ್ಞಾನ ಹಾಗೂ ಗ್ರಂಥಾಲಯ ವಿಭಾಗ ಮತ್ತು ಮಹಾವಿದ್ಯಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್ ಮಾರ್ಗದರ್ಶನದಲ್ಲಿ ಮುಂದಿನ ತಲೆಮಾರಿನ ಶೈಕ್ಷಣಿಕ ಕ್ಷೇತ್ರದ ಕೃತಕ ಬುದ್ಧಿಮತ್ತೆ (AI) ಆಧಾರಿತ ಬೋಧನೆ, ಸಂಶೋಧನೆ ಮತ್ತು ಆವಿಷ್ಕಾರ ವಿಷಯದಡಿ ಆಯೋಜಿಸಿರುವ ಐದು ದಿನಗಳ ರಾಷ್ಟ್ರೀಯ ಮಟ್ಟದ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರ (Faculty Development Programme – FDP) ಕ್ಕೆ ಚಾಲನೆ ನೀಡಲಾಯಿತು.

ಕಾರ್ಯಾಗಾರವನ್ನು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗು ಸಂಶೋಧನಾ ನಿರ್ದೇಶಕರಾದ ಡಾ. ಕೆ ಕೃಷ್ಣಮೂರ್ತಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ಆಧುನಿಕ ತಂತ್ರಜ್ಞಾನಕ್ಕೆ ಅಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ ಹಾಗು ವಿದ್ಯಾರ್ಥಿಗಳಲ್ಲಿ ಸರ್ವ ತೋಮುಖ ಅಭಿವೃದ್ಧಿಯನ್ನು ಸಾಧಿಸಲು ಪ್ರಸ್ತುತ ಸಂದರ್ಭದಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕಾರ್ಯಗಾಲ ಎಲ್ಲಾ ವಿಶ್ವವಿದ್ಯಾಲಯ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸುವ ಅವಶ್ಯಕವಿದೆ. ಕಾರ್ಯಗಾರವು ಕೃತಕ ಬುದ್ಧಿಮತ್ತೆ ಆಧಾರಿತ ಬೋಧನೆ, ಸಂಶೋಧನೆ ಹಾಗೂ ಇತ್ತೀಚಿನ ಆವಿಷ್ಕಾರಗಳನ್ನು ಪರಿಚಯಿಸುವುದರ ಜೊತೆಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಅಧ್ಯಾಪಕರಿಗೆ ಒದಗಿಸುವ ಉಪಯೋಗಿ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಮಾತನಾಡಿ, ನಾವು ಇಂದು ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಪ್ರತಿ ನಿತ್ಯ ತಂತ್ರಜ್ಞಾನದ ಹೊಸ ಹೊಸ ಸಂಶೋಧನೆ ಮತ್ತು ಬೆಳವಣಿಗೆಯನ್ನು ಗಮನಿಸಬಹುದು. ಕೃತಕ ಬುದ್ಧಿಮತ್ತೆಯಂತ ಆವಿಷ್ಕಾರಗಳ ಜೊತೆಗೆ ಹೊಂದಿಕೊಂಡು ಹೋಗುವ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರವೂ ತಂತ್ರಜ್ಞಾನದ ಬದಲಾವಣೆ ಮತ್ತು ಬೆಳವಣಿಗೆಯೊಂದಿಗೆ ಹೆಜ್ಜೆ ಹಾಕಿದಾಗ ಮಾತ್ರ ಉನ್ನತ ಹಂತವನ್ನು ತಲುಪಲು ಸಾಧ್ಯ.
ಪುಸ್ತಕಗಳಲ್ಲಿ ಶೋಧಿಸುತ್ತಿದ್ದ ಜ್ಞಾನ ಇಂದು ಗೂಗಲ್ ಹಂತವನ್ನು ಕಳೆದು ಎಐ ಪುಟಗಳನ್ನು ತಲುಪುವುದರ ಜೊತೆಗೆ ಒಂದು ವಿಷಯವನ್ನು ಹಲವು ಆಯಾಮಗಳಲ್ಲಿ ಅರ್ಥೈಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಆದರೆ ಇದರ ಸದ್ಬಳಕೆಯ ಮಾದರಿಗಳನ್ನು ನಾವು ಕರಗತ ಮಾಡಿಕೊಳ್ಳಬೇಕು. ಆಳವಾದ ಅಧ್ಯಯನ, ವಿಷಯಗಳ ವಿವರಣೆ ಮತ್ತು ವಿಶ್ಲೇಷಣೆಯ ಜೊತೆಗೆ ಪ್ರಾಯೋಗಿಕವಾಗಿ ತೊಡಗಿಸಿಕೊಂಡಾಗ ಮತ್ತಷ್ಟು ಸದೃಢರಾಗುತ್ತೇವೆ. ಪ್ರಸ್ತುತ ಕಾಲಕ್ಕನುಗುಣವಾಗಿ ಶಿಕ್ಷಕರು ಕೇವಲ ಮಾಹಿತಿಯನ್ನು ಹಂಚುವವರಾಗದೆ ವಿದ್ಯಾರ್ಥಿಗಳ ಮಾರ್ಗದರ್ಶಕರು, ಮೆಂಟರ್, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸಿ ಸ್ವತಂತ್ರವಾಗಿ ಯೋಚಿಸುವಂತೆ ಪ್ರೇರೇಪಿಸಬೇಕು. ಸಮಸ್ಯೆ ಪರಿಹಾರ ಮತ್ತು ಸ್ವ ನಿರ್ಧಾರ ಕೈಗೊಳ್ಳುವ ಕೌಶಲ್ಯಗಳನ್ನು ಬೆಳೆಸುವಂತವರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸಂದೀಪ್ ಆರ್ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಹಾಗೂ ಅಧ್ಯಾಪಕರ ಸರ್ವತೋಮುಖ ಬೆಳವಣಿಗೆಗಾಗಿ ನಾನ ರೀತಿಯ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ನಡೆಸಿಕೊಂಡು ಬಂದಿದೆ. ಇದರ ಭಾಗವಾಗಿ ಇಂದು ಆರಂಭಗೊಳ್ಳುತ್ತಿರುವ ಐದು ದಿನಗಳ ಕಾರ್ಯಗಾರವು ಅತ್ಯಂತ ಉಪಯುಕ್ತ ಮತ್ತು ಅತ್ಯವಶ್ಯಕ ಕಾರ್ಯಕ್ರಮವಾಗಿದೆ. ಕಾರ್ಯಗಾರದಲ್ಲಿ ರಾಷ್ಟ್ರೀಯ ಮಟ್ಟದ ವಿವಿಧ ವಿಷಯಗಳ ತಜ್ಞರು ಪಾಲ್ಗೊಂಡು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಾಗಾರದ ಸಂಯೋಜಕರಾದ ಡಾ. ರಜತ ಪಿ. ಶೆಟ್ಟಿ ಹಾಗು ಡಾ. ನವೀನ್ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್ ಕಾಕತ್ಕಾರ್ , ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ವಿಶ್ವನಾಥ್ ಪಿ, ಡೀನ್ ಡಾ.ಸೌಮ್ಯ ಬಿ ಪಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಸಂತೋಷ್ ಸೇರಿದಂತೆ ಕಾರ್ಯಾಗಾರ ಆಯೋಜನಾ ಸಮಿತಿಯ ಕಾರ್ಯದರ್ಶಿಗಳಾದ ಡಾ. ವಿದ್ಯಾ ಕೆ, ಡಾ. ನಿತ್ಯಾನಂದ ಬಿ. ಡಾ. ಗಿರೀಶ್ ಕುಮಾರ್ ಸೇರಿದಂತೆ ಡಾ. ರವೀಶ್ ಪಡುಮಲೆ, ಡಾ. ತ್ಯಾಗರಾಜ್ ಮತ್ತು ಇತರೆ ಪ್ರಮುಖರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಜ್ಯೋತಿ ಮತ್ತು ತಂಡದವರು ಪ್ರಾರ್ಥಿಸಿದರು. ಸಂಯೋಜಕ ಡಾ. ನವೀನ್ ಕುಮಾರ್ ಸ್ವಾಗತಿಸಿದರು. ಉಪನ್ಯಾಸಕಾರ ಮನೀಷಾ ಮತ್ತು ರಕ್ಷಿತ್ ನಿರೂಪಿಸಿ, ಕಾರ್ಯಕ್ರಮದ ಸಂಯೋಜಕಿ ಡಾ. ರಜತ ಪಿ. ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಉಪನ್ಯಾಸಕರು ಸೇರಿದಂತೆ 200 ಕ್ಕೂ ಅಧಿಕ ನೋಂದಾಯಿತ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.












