ಬೆಳ್ತಂಗಡಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ರೂ.187 ಕೋಟಿ ಅವ್ಯವಹಾರ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ಮೈಸೂರು ಚಾಮರಾಜನಗರದ ಹನೂರು ವ್ಯಾಪ್ತಿಯಲ್ಲಿ ನಡೆದ ಎನ್ಕೌಂಟರ್ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಳ್ತಂಗಡಿ ಮಂಡಲ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಇಂದು ಬೆಳ್ತಂಗಡಿ ತಾಲೂಕು ಕಚೇರಿಯ ಉಪತಹಶೀಲ್ದಾರ್ ಜಯ ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಾಲ್ಮೀಕಿ ಹಗರಣ ಆರೋಪ:
ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಕೋಟ್ಯಂತರ ರೂಪಾಯಿ ಹಣವನ್ನು ನಿಗಮದ ಮೂಲಕ ಲೂಟಿ ಮಾಡಿ, ತೆಲಂಗಾಣದಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಚುನಾವಣಾ ಕಾರ್ಯಕ್ಕೆ ಬಳಸಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗವಾಗಿದೆ. ಇದೇ ಕಾರಣಕ್ಕೆ ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅವರ ರಾಜೀನಾಮೆ ಪಡೆಯಲಾಗಿತ್ತು. ಇಷ್ಟೆಲ್ಲಾ ಗಂಭೀರ ಆರೋಪಗಳಿದ್ದರೂ, ಸ್ವಪಕ್ಷದ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ನಾಗೇಂದ್ರ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದು ಖಂಡನೀಯ. ಆದ್ದರಿಂದ ಕಾರ್ಯಾಂಗದ ಮುಖ್ಯಸ್ಥರಾದ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ, ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಬೆಳ್ತಂಗಡಿ ಬಿಜೆಪಿ ಮಂಡಲವು ಮನವಿಯಲ್ಲಿ ಆಗ್ರಹಿಸಿದೆ.
ಚಾಮರಾಜನಗರ ಎನ್ಕೌಂಟರ್:
ಕಳೆದ ದಿನಾಂಕ 15-08-2026 ರಂದು ಚಾಮರಾಜನಗರದ ಹನೂರು ಬಳಿ ನಡೆದ ಎನ್ಕೌಂಟರ್ ಘಟನೆಯು ತೀವ್ರ ಆತಂಕ ಸೃಷ್ಟಿಸಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಮತ್ತು ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಬೇಕು. ಬಾಧಿತ ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಪದಾಧಿಕಾರಿಗಳು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಶಾಸಕ ಪ್ರತಾಪಸಿಂಹ ನಾಯಕ್, ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಗಣ್ಯರಾದ ವಸಂತ ಮಜಲು, ರಾಕೇಶ್ ಹೆಗ್ಡೆ, ಪ್ರಸಾದ್ ಕುಮಾರ್, ಸೀತಾರಾಮ ಬೆಳಾಲು, ಈಶ್ವರ ಭೈರಾ, ಪದ್ಮನಾಭ ಅರ್ಕಜೆ, ಸುಧೀರ್ ಸುವರ್ಣ, ನವೀನ್ ಸಾಮಾನಿ, ಗಣೇಶ್ ಗೌಡ ನಾವೂರು, ರಾಘವ ಕಲ್ಮಂಜ, ವಿಠಲ ಆಚಾರ್ಯ, ಅರವಿಂದ ಶೆಟ್ಟಿ, ಚಂದ್ರಕಾಂತ್ ನಿಡ್ಡಾಜೆ, ಸದಾನಂದ ಉಂಗಿಲಬೈಲು, ಜಗದೀಶ್ ಕನ್ನಾಜೆ, ಕೊರಗಪ್ಪ ಗೌಡ ಚಾರ್ಮಾಡಿ, ವಿಜಯ ಗೌಡ ವೇಣೂರು, ಚಂದ್ರರಾಜ್ ಮೇಲಂತಬೆಟ್ಟು, ಪ್ರಭಾಕರ ಆಚಾರ್ಯ, ಗೀರೀಶ್ ಡೋಂಗ್ರೆ, ಪ್ರದೀಪ್ ಶೆಟ್ಟಿ ಜಿ.ಕೆರೆ, ಯೋಗೀಶ್ ಕೊಕ್ಕಡ, ಪ್ರಸನ್ನ ಸುದೇಮುಗೇರು, ಶರತ್ಕುಮಾರ್ ಶೆಟ್ಟಿ ಬೆಳ್ತಂಗಡಿ, ಸುಧಾಕರ ಲಾಯಿಲ, ಪೂರ್ಣಿಮ, ವಿದ್ಯಾಶ್ರೀನಿವಾಸ, ತುಳಸಿ ಮಾಲಾಡಿ, ವಸಂತಿ ಮಚ್ಚಿನ, ರಂಜಿನಿ ಮುಂಡಾಜೆ, ವಸಂತ ಮರಕಡ, ಉಮೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.












