ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ತೀವ್ರತೆಯಿಂದಾಗಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಘೋಷಿಸಲಾಗಿದ್ದ ಮಳೆ ರಜೆ ದಿನಗಳ ಬೋಧನಾ ಅವಧಿಯನ್ನು ಸರಿದೂಗಿಸಲು ಶಾಲಾ ಶಿಕ್ಷಣ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಮಳೆಯ ಕಾರಣ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳಿಗೆ ರಜೆಗಳನ್ನು ಘೋಷಿಸಿರುತ್ತಾರೆ. ಈವರೆಗೆ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬಂಟ್ವಾಳ ಮತ್ತು ಮೂಡಬಿದ್ರೆ ತಾಲೂಕುಗಳಿಗೆ ಒಟ್ಟು ಎಂಟು ಪೂರ್ಣ ದಿನಗಳು ಮತ್ತು ಒಂದು ಅರ್ಧ ದಿನದ ರಜೆಯನ್ನು ಘೋಷಿಸಲಾಗಿರುತ್ತದೆ ಮತ್ತು ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಲಯಗಳಿಗೆ ಒಟ್ಟು ಒಂಭತ್ತು ಪೂರ್ಣ ದಿನಗಳ ರಜೆಗಳನ್ನು ಘೋಷಿಸಲಾಗಿರುತ್ತದೆ. ಈ ರಜಾ ದಿನಗಳಲ್ಲಿ ಕೊರತೆಯಾಗಿರುವ ಬೋಧನಾ ಅವಧಿಗಳನ್ನು ಸರಿದೂಗಿಸಲು ಅಗಸ್ಟ್ ತಿಂಗಳ ಮೂರನೇ ವಾರದಿಂದ ಆರಂಭವಾಗಿ ಶನಿವಾರ ಅಪರಾಹ್ನ ಪೂರ್ಣ ತರಗತಿಗಳನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಇತರೆ ದಿನಗಳಲ್ಲಿ ಹೆಚ್ಚುವರಿಯಾಗಿ ಸಂಜೆ ಅವಧಿಯಲ್ಲಿ ಒಂದು ಬೋಧನಾ ಅವಧಿ ನಡೆಸಲು ಸೂಚಿಸಿದೆ.
ಪ್ರತಿ ಶಾಲೆಯಲ್ಲಿ ಮಳೆ ರಜೆ ಲೆಕ್ಕಾಚಾರವನ್ನು ಇಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅವಧಿಗಳನ್ನು ಲೆಕ್ಕಾಚಾರ ಮಾಡಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ಎಸ್ಡಿಎಂಸಿ ಅವರೊಂದಿಗೆ ಚರ್ಚಿಸಿ ದಿನಗಳನ್ನು ನಿರ್ಧರಿಸಿ ವೇಳಾಪಟ್ಟಿಯಲ್ಲಿ ದಾಖಲಿಸಿ ಶೈಕ್ಷಣಿಕ ಮಾರ್ಗಸೂಚಿಯಂತೆ ಬೋಧನಾ ದಿನಗಳನ್ನು ಸರಿದೂಗಿಸಲುಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.











