ಬೆಳ್ತಂಗಡಿ : ‘ಬದುಕಿನ ಸವಾಲುಗಳನ್ನು ಮೆಟ್ಟಿ ನಿಲ್ಲಲು ರಾಷ್ಟ್ರೀಯ ಸೇವಾ ಯೋಜನೆಯ ತರಬೇತಿಗಳು ಪೂರಕವಾಗಿವೆ. ಹಾಗಾಗಿ ವಿದ್ಯಾರ್ಥಿ ಬದುಕಿನಲ್ಲಿ ಪ್ರತಿಯೊಬ್ಬರೂ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಪತ್ರಕರ್ತ ಮನೋಹರ ಬಳಂಜ ಹೇಳಿದರು.

ಅವರು ಸೆ.7ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2026-27 ನೇ ಶೈಕ್ಷಣಿಕ ಸಾಲಿನ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಬೇಕು. ಶಾಲಾ ಕಾಲೇಜಿನೊಳಗಿನ ಉತ್ತಮ ಅವಕಾಶಗಳನ್ನು ಪಡೆದುಕೊಂಡ ವಿದ್ಯಾರ್ಥಿ ಬದುಕಿನಲ್ಲಿ ಎಂದಿಗೂ ಸೋಲಲು ಸಾಧ್ಯವಿಲ್ಲ’ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಪ್ರೀತಿತ ಧರ್ಮವಿಜೇತ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ನಮ್ಮ ಯೋಚನೆಗಳು ಸದ್ವಿಚಾರದಿಂದ ಕೂಡಿದಾಗ ಮಾತ್ರ ಮಾಡುವ ಕಾರ್ಯಗಳು ಉತ್ತಮವಾಗಿರುವುದು. ಸವಾಲಿನ ಸಂಕೀರ್ಣ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ವಿಚಾರಗಳ ಅನ್ವೇಷಣೆಯಲ್ಲಿ ತೊಡಗಬೇಕು’ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ, ಉಜಿರೆ ಎಸ್.ಡಿ.ಎಂ. ಕಾಲೇಜಿನ ರಂಗ ನಿರ್ದೇಶಕ ಯಶವಂತ ಬೆಳ್ತಂಗಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಸಮಾರಂಭ ಉದ್ದೇಶಿಸಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ, ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಎ. ಶಮೀವುಲ್ಲಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಪ್ರಮಾಣವಚನ ಭೋಧಿಸಿದರು.
ವೇದಿಕೆಯಲ್ಲಿ ಘಟಕದ ವಿದ್ಯಾರ್ಥಿ ನಾಯಕ ಪ್ರಶಾಂತ್, ನಾಯಕಿ ಸಾನಿಕ ಇದ್ದರು.
ಘಟಕದ ಕಾರ್ಯಕ್ರಮಾಧಿಕಾರಿ ಗಣೇಶ್ ಬಿ ಶಿರ್ಲಾಲು ಸ್ವಾಗತಿಸಿದರು. ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಸೌಜನ್ಯ, ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಚಂದನ ಪರಿಚಯಿಸಿದರು. ಘಟಕದ ಸಹ ಕಾರ್ಯಕ್ರಮಾಧಿಕಾರಿ ಶುಭಲಕ್ಷ್ಮೀ ವಂದಿಸಿದರು. ಎನ್.ಎಸ್.ಎಸ್.ಸ್ವಯಂ ಸೇವಕರಾದ ಅಕ್ಷಯ್ ಹಾಗೂ ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.












