ಶಿರ್ಲಾಲು: ನಿವೃತ್ತಿಯ ಸಂದರ್ಭದಲ್ಲಿ ದೊರೆಯಬೇಕಾದ ಪಿಎಫ್, ಗ್ರಾಚ್ಯೂಟಿ ಹಾಗೂ ಗಳಿಕೆ ರಜೆಯ ಸಂಬಳವನ್ನು ನೀಡಿಲ್ಲ ಎಂದು ಆರೋಪಿಸಿ ನಿವೃತ್ತ ಸಿಇಒ ಅಮ್ಮಾಜಿ ಕೋಟ್ಯಾನ್ ಹಾಗೂ ನಿವೃತ್ತ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಪ್ರಭಾಕರ್ ಅವರು ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಎದುರು ನ್ಯಾಯಕ್ಕಾಗಿ ಶಾಂತಿಯುತ ಧರಣಿ ಸತ್ಯಾಗ್ರಹವನ್ನು ಸೆ 10ರಂದು ನಡೆಸಿದರು.
ಮಿದುಳಿನ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಅಮ್ಮಾಜಿ ಕೋಟ್ಯಾನ್ ಅವರು, ತಮ್ಮ ನಿವೃತ್ತಿಯ ಬಳಿಕ ಸಿಗಬೇಕಾದ ಹಣವನ್ನು ಬಿಡುಗಡೆ ಮಾಡಬೇಕು. ಜೀವನಪೂರ್ತಿ ದುಡಿದು ಗಳಿಸಿದ ಹಣಕ್ಕಾಗಿ ಇದೀಗ ಧರಣಿ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅದೇ ರೀತಿ ನಿವೃತ್ತ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಪ್ರಭಾಕರ್ ಅವರು ಹೃದಯದ ತೆರೆದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿವೃತ್ತಿಯ ಬಳಿಕ ತಮಗೆ ದೊರೆಯಬೇಕಾದ ಗ್ರಾಚ್ಯೂಟಿ, ಗಳಿಕೆ ರಜೆಯ ಸಂಬಳ ಹಾಗೂ ಎರಡು ವರ್ಷಗಳ ರಜೆ ವೇತನ ಸೇರಿದಂತೆ ಬಾಕಿ ಇರುವ ಹಣವನ್ನು ನೀಡದೆ ಆಡಳಿತ ಮಂಡಳಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ನ್ಯಾಯಕ್ಕಾಗಿ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿದರು.
ತಮಗೆ ಕಾನೂನುಬದ್ಧವಾಗಿ ದೊರೆಯಬೇಕಾದ ನಿವೃತ್ತಿ ಸೌಲಭ್ಯ ಹಾಗೂ ಬಾಕಿ ಹಣವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಆಡಳಿತ ಮಂಡಳಿಯನ್ನು ಅವರು ಆಗ್ರಹಿಸಿದರು.












