ಬೆಳ್ತಂಗಡಿ: ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಸಿವಿಸಿ ಹಾಲ್ನಿಂದ ಸ್ವಲ್ಪ ಮುಂದೆ ಹೌಸಿಂಗ್ ಬೋರ್ಡ್ ಕಾಲನಿ ತಿರುವಿನಲ್ಲಿ ರಸ್ತೆ ಬದಿ ಹೊಂಡವೊಂದು ವಾಹನ ಚಾಲಕರಿಗೆ ಅಪಾಯವನ್ನು ತಂದೊಡ್ಡಿದೆ.
ಹೌಸಿಂಗ್ ಬೋರ್ಡ್ ಕಾಲನಿಗೆ ತಿರುಗುವ ರಸ್ತೆ ಬದಿಯಲ್ಲೇ ಈ ಹೊಂಡವಿದ್ದು, ಇದರ ಅಪಾಯವನ್ನು ಅರಿತ ಸ್ಥಳೀಯರು ಅಲ್ಲಿ ಕೋಲಿಗೆ ಪ್ಲಾಸ್ಟಿಕ್ ಬಾಟಲಿಯನ್ನು ಕವುಚಿ ಹಾಕಿ, ತೆಂಗಿನ ಸೋಗೆಯ ದಿಂಡು(ಕೊತ್ತಲಿAಗೆ) ಇಟ್ಟು, ಈ ಜಾಗ ಅಪಾಯಕಾರಿಯಾಗಿದೆ ಎಂಬ ಎಚ್ಚರಿಕೆಯನ್ನು ವಾಹನ ಚಾಲಕರಿಗೆ ನೀಡುವ ಪ್ರಯತ್ನ ಮಾಡಿದ್ದಾರೆ.
ಇದು ಮಳೆಯ ನೀರು ಹರಿದು ಹೋಗಿ ನಿರ್ಮಾಣವಾದ ಗುಂಡಿಯಲ್ಲ, ಮಾನವ ನಿರ್ಮಿತ ಗುಂಡಿ, ಈ ಭಾಗದಲ್ಲಿ ಕುಡಿಯುವ ನೀರಿಗಾಗಿ ಪೈಪ್ಲೈನ್ ಕಾಮಗಾರಿ ಮಾಡಿದವರು ಪೈಪ್ ಹಾಕಿ, ಹೊಂಡವನ್ನು ಮುಚ್ಚದೆ ಹಾಗೇ ಬಿಟ್ಟಿದ್ದರಿಂದ ಮಳೆಗಾಲದಲ್ಲಿ ನೀರು ಹರಿದು ದೊಡ್ಡ ಹೊಂಡ ನಿರ್ಮಾಣವಾಗಿದೆ ಎಂದು ಪಟ್ಟಣ ಪಂಚಾಯತ್ ಮಾಜಿ ಹಿರಿಯ ಸದಸ್ಯ ಜಗದೀಶ್ ಡಿ. ತಿಳಿಸಿದ್ದಾರೆ.
ಇದರ ಹತ್ತಿರವೇ ತಹಶೀಲ್ದಾರರ ಮನೆಯಿದೆ. ಹೌಸಿಂಗ್ ಬೋರ್ಡ್ ಕಾಲನಿ ತಿರುವ ರಸ್ತೆ ಬದಿಯಲ್ಲಿ ಹೊಂಡವಿದ್ದು, ಹೌಸಿಂಗ್ ಬೋರ್ಡ್ಗೆ ಹೋಗುವ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಈ ಪ್ರದೇಶಗಳಿಗೆ ವಾಹನಗಳಲ್ಲಿ ಬರುವ ಸಾರ್ವಜನಿಕರು ಹಾಗೂ ಪಾದಾಚಾರಿಗಳು ರಸ್ತೆ ಬದಿಗೆ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಯಾವುದೇ ಅಪಾಯವಾಗುವ ಮುನ್ನ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.











