ಬೆಳ್ತಂಗಡಿ: ನಾಡಿನ ಪ್ರಸಿದ್ಧ ಸ್ವರ್ಣೋದ್ಯಮ ಸಂಸ್ಥೆ ಮುಳಿಯ ಜುವೆಲ್ಲರ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಕೃಷ್ಣವೇಷ,ಬಾಲಕೃಷ್ಣ ಸ್ಪರ್ಧೆಯಲ್ಲಿ ಬಳಂಜದ ಸ್ಮಯ ಎಸ್. ಕೋಟ್ಯಾನ್ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮುಳಿಯ ಜುವೆಲ್ಲರ್ಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಮುದ್ದುಕೃಷ್ಣ, ರಾಧಾಕೃಷ್ಣ ಹಾಗೂ ಬಾಲಕೃಷ್ಣ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ಬಳಂಜ ನಿವಾಸಿ, ಎಕ್ಸೆಲ್ ಟೆಕ್ನೋ ಸ್ಕೂಲ್ನಲ್ಲಿ ದ್ವಿತೀಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ಮಯ ಎಸ್. ಕೋಟ್ಯಾನ್, ಪತ್ರಕರ್ತ ಸಂತೋಷ್ ಪಿ. ಕೋಟ್ಯಾನ್ ಹಾಗೂ ಅಮೃತಾ ದಂಪತಿಯ ಪುತ್ರಿ. ಮುದ್ದುಕೃಷ್ಣ,ಬಾಲಕೃಷ್ಣನ ಆಕರ್ಷಕ ವೇಷಭೂಷಣ ಹಾಗೂ ಬಾಲಲೀಲೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸ್ಮಯ, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕುಟುಂಬ ಹಾಗೂ ಶಾಲೆಗೆ ಹೆಮ್ಮೆ ತಂದಿದ್ದಾರೆ.











