ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯನ್ನು ಭಾರತೀಯ ಮಜ್ದೂರು ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಸ್ವಾಗತಿಸುತ್ತದೆ. ಕರಾವಳಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವ ಈ ಸಂದರ್ಭದಲ್ಲಿ, ಅಭಿವೃದ್ಧಿಯ ನಿಜವಾದ ಶಕ್ತಿ ಮತ್ತು ಪಾಲುದಾರರಾಗಿರುವ ಕಾರ್ಮಿಕ ವರ್ಗದ ಹಿತಾಸಕ್ತಿಯೂ ಸರ್ಕಾರದ ನೀತಿ ನಿರ್ಧಾರಗಳಲ್ಲಿ ಪ್ರಮುಖ ಸ್ಥಾನ ಪಡೆಯಬೇಕು ಎಂಬುದು ನಮ್ಮ ದೃಢವಾದ ಅಭಿಪ್ರಾಯ.
ದಕ್ಷಿಣ ಕನ್ನಡದ ಕೈಗಾರಿಕೆ, ಬಂದರು, ನಿರ್ಮಾಣ, ಸಾರಿಗೆ, ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಸೇವಾ ಕ್ಷೇತ್ರಗಳ ಬೆಳವಣಿಗೆಯಲ್ಲಿ ಸಾವಿರಾರು ಕಾರ್ಮಿಕರ ಪರಿಶ್ರಮ ಮಹತ್ವದ ಪಾತ್ರ ವಹಿಸುತ್ತಿದೆ. ಹೀಗಾಗಿ ಅಭಿವೃದ್ಧಿಯ ಯೋಜನೆಗಳ ಜೊತೆಗೆ ಉದ್ಯೋಗ ಭದ್ರತೆ, ನ್ಯಾಯಯುತ ವೇತನ, ಕೆಲಸದ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ, ವಸತಿ, ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಭದ್ರತೆ ಕಾರ್ಮಿಕರ ಹಕ್ಕುಗಳಾಗಿ ಖಾತ್ರಿಯಾಗಬೇಕು.
ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ವಿವಿಧ ವಲಯಗಳ ಕಾರ್ಮಿಕರಿಗೆ ಲಭ್ಯವಿರುವ ಕಲ್ಯಾಣ ಯೋಜನೆಗಳು ಕಾಗದದ ಮೇಲಿನ ಸೌಲಭ್ಯಗಳಾಗದೆ, ಸರಳ, ಪಾರದರ್ಶಕ ಮತ್ತು ತ್ವರಿತ ವ್ಯವಸ್ಥೆಯ ಮೂಲಕ ಅರ್ಹ ಕಾರ್ಮಿಕರನ್ನು ತಲುಪುವಂತೆ ಅನುಷ್ಠಾನಗೊಳ್ಳಬೇಕು. ಕಾರ್ಮಿಕರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಬಾಕಿ ಇರುವ ಸಮಸ್ಯೆಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡುವ ವ್ಯವಸ್ಥೆಯೂ ಅಗತ್ಯ.
ಹೊಸ ಕೈಗಾರಿಕೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸ್ಥಳೀಯ ಯುವಕರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಕರಾವಳಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ರೂಪಿಸುವ ಸಂದರ್ಭದಲ್ಲಿ ಕಾರ್ಮಿಕ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗೆ ಪ್ರತ್ಯೇಕ ಆದ್ಯತೆ ಹಾಗೂ ಅಗತ್ಯ ಅನುದಾನ ಕಲ್ಪಿಸಬೇಕು.
ಕಾರ್ಮಿಕರ ಬೆವರಿನಿಂದ ನಿರ್ಮಾಣವಾಗುವ ಕರಾವಳಿಯ ಅಭಿವೃದ್ಧಿಯ ಫಲ ಅವರ ಕುಟುಂಬಗಳ ಬದುಕಿನಲ್ಲೂ ಕಾಣಿಸಬೇಕು. ಮಂಗಳೂರು ಸಚಿವ ಸಂಪುಟ ಸಭೆ ಅಭಿವೃದ್ಧಿಯ ಜೊತೆಗೆ ದುಡಿಯುವ ಜನರ ಗೌರವ, ಭದ್ರತೆ ಮತ್ತು ಭವಿಷ್ಯವನ್ನು ಬಲಪಡಿಸುವ ಐತಿಹಾಸಿಕ ನಿರ್ಣಯಗಳಿಗೆ ಸಾಕ್ಷಿಯಾಗಲಿ ಎಂಬುದು ಬಿಎಂಎಸ್ ನ ಆಶಯ ಎಂದು ದಕ್ಷಿಣ ಕನ್ನಡ ಜಿಲ್ಲೆ ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ತಿಳಿಸಿದ್ದಾರೆ.











