25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿ

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ: ಶಾಸಕ ಹರೀಶ್ ಪೂಂಜ: ಮಾಜಿ ಶಾಸಕ ವಸಂತ ಬಂಗೇರ ನಡೆ ವಿರುದ್ಧ ಹಾಲಿ ಶಾಸಕರ ಕ್ರಮ ಎಚ್ಚರಿಕೆ: ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳ ಹಕ್ಕುಗಳಿಗೆ ಚ್ಯುತಿಯಾದ ಸಂದರ್ಭ ಹಕ್ಕುಚ್ಯುತಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ

ಬೆಳ್ತಂಗಡಿ: ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಸೇವೆ ಬಗ್ಗೆ ಕಳೆದ ನಾಲೈದು ವರ್ಷಗಳಿಂದ ಯಾವೊಬ್ಬ ರೋಗಿಯೂ ದೂರಿದ್ದನ್ನು ನಾನು ನೋಡಿಲ್ಲ. ಆಸ್ಪತ್ರೆ ಸುಸಜ್ಜಿತವಾಗಿದೆ. ಆದರೂ ಮಾಜಿ ಶಾಸಕರು ಅವ್ಯವಸ್ಥೆ ಇದೆ ಎಂದು ಆರೋಪಿಸುತ್ತಾರೆ. ಅಲ್ಲಿರುವುದು ಸಿಬ್ಬಂದಿ ಹಾಗೂ ರೋಗಿಗಳ ಮಧ್ಯೆ ಇರುವ ಗೊಂದಲವೇ ಹೊರತು ಬೇರೆ ಯಾವುದೇ ಸಮಸ್ಯೆಗಳಿಲ್ಲ. ಆಸ್ಪತ್ರೆಯಲ್ಲಿ ಮಾಜಿ ಶಾಸಕರ ಅಧಿಕಾರಾವಧಿಯಲ್ಲಿ 2 ಡಯಾಲಿಸಿಸ್ ಮಷಿನ್ ಇತ್ತು. ಸಾರ್ವಜನಿಕರ ಅಗತ್ಯ ಮನಗಂಡು ನನ್ನ ಅವಧಿಯಲ್ಲಿ ಹೆಚ್ಚುವರಿ 6 ಡಯಾಲಿಸಿಸ್ ಮೆಷಿನ್ ಅಳವಡಿಸಿದ್ದರಿಂದ ಈಗ ಒಟ್ಟು 8 ಡಯಾಲಿಸಿಸ್ ಮಷಿನ್ ಇದೆ. ಸರಾಸರಿ 80 ಕಿಡ್ನಿರೋಗಿಗಳಿಗೆ ಅನುಕೂಲವಾಗುತ್ತಿದೆ. ಸಿದ್ದರಾಮಯ್ಯನವರು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದೆಲ್ಲೆಡೆ ಡಯಾಲಿಸಿಸ್ ನಿರ್ವಹಿಸಲು ಹೊರರಾಜ್ಯದ ಸಂಜೀವಿನಿ’ ಏಜೆನ್ಸಿಗೆ 10 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದ್ದು, ಅದರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಕೈಯಲ್ಲಿಲ್ಲ. ಸರ್ಕಾರವೇ ಪರಿಹರಿಸಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಜನರಿಂದ ಆಯ್ಕೆಯಾದ ಶಾಸಕರಿರುವಾಗ ಇನ್ಯಾರೋ ಬಂದು ಅಧಿಕಾರಿಗಳನ್ನು ನಿಂದಿಸುವುದು, ನಿರ್ದೇಶನಗಳನ್ನು ನೀಡುವುದರಿಂದ ಹಾಲಿ ಶಾಸಕರ ಹಕ್ಕುಗಳಿಗೆ ಚ್ಯುತಿಯಾಗುತ್ತಿದೆ. ಶಾಸಕರಿಗೆ ತನ್ನದೇ ಆದ ಶಿಷ್ಟಾಚಾರಗಳಿದ್ದು, ಈ ಹಕ್ಕು ಉಲ್ಲಂಘನೆಯಾದರೆ ಯಾರಿಗೆ ಯಾವ ರೀತಿ ತಿಳಿಸಬೇಕೆಂಬುದರ ಬಗ್ಗೆ ಸ್ಪಷ್ಟತೆ ನನಗಿದೆ.ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಹಕ್ಕು ರಕ್ಷಣೆಗಾಗಿ ನಿಯಮಗಳಿವೆ. ನನ್ನ ಹಕ್ಕುಗಳಿಗೆ ಚ್ಯುತಿಯಾದ ಸಂದರ್ಭ, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅಡ್ಡಿಯಾದಾಗ ಹಕ್ಕುಚ್ಯುತಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಶಾಸಕ ಹರೀಶ್ ಪೂಂಜ ಸ್ಪಷ್ಟಪಡಿಸಿದ್ದಾರೆ.

ಮಾಜಿ ಶಾಸಕರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಸಿಬ್ಬಂದಿಯನ್ನು ನಿಂದಿಸುವುದು, ತಹಸೀಲ್ದಾರ್ ಸಹಿತ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುವುದು-ನಿಂದಿಸುವುದು, ಸರ್ಕಾರಿ ಯೋಜನೆಗಳ ಉದ್ಘಾಟನೆ ಸಂದರ್ಭ ಆಮಂತ್ರಣ ಇಲ್ಲದಿದ್ದರೂ ಅನಧಿಕೃತವಾಗಿ ವೇದಿಕೆ ಹತ್ತಿ ಭಾಷಣ ಮಾಡುವುದು ಮತ್ತಿತರ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ.ಜನಪ್ರತಿನಿಧಿ ಅಲ್ಲದವರು ಅಧಿಕಾರ ಚಲಾಯಿಸುವಾಗ ಅಧಿಕಾರಿಗಳು ಅಸಹಾಯಕರಾಗುತ್ತಾರೆ. ಅಧಿಕಾರಿಗಳಿಗೆ ಅವರದ್ದೇ ಆದ ವೃತ್ತಿ ಗೌರವಗಳಿರುತ್ತವೆ. ಕಾಂಗ್ರೆಸ್‌ ಸರ್ಕಾರ ಇದೆ ಎಂಬ ಮಾತ್ರಕ್ಕೆ ಅಧಿಕಾರಿಗಳನ್ನು ಬಯ್ಯುವುದು ಸರಿಯಲ್ಲ. ಬಯ್ಯುವುದರಿಂದ ಎಲ್ಲವೂ ಸರಿಯಾಗುತ್ತದೆ ಎಂಬುದು ಭ್ರಮೆ. ಎಲ್ಲ ದುರಹಂಕಾರಕ್ಕೆ ಕೊನೆ ಇದ್ದೇ ಇದೆ. ಸೂಕ್ತ ಸಮಯ ಸಂದರ್ಭ ಬಂದಾಗ ಜನರೇ ಉತ್ತರ ನೀಡುತ್ತಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮಹತ್ವ ತಿಳಿದಿದ್ದರೆ ಮಾಜಿ ಶಾಸಕರು ಈ ರೀತಿ ಮಾಡುವುದಿಲ್ಲ. ತಿಳಿದೂ ತಿಳಿಯದ ರೀತಿಯಲ್ಲಿದ್ದರೆ ಅಂಥವರಿಗೆ ನಾವು ಬುದ್ಧಿ ಹೇಳುವ ಪ್ರಯತ್ನ ಮಾಡುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related posts

ಬೆಳ್ತಂಗಡಿ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ: ವಿವಿಧ ಕ್ಷೇತ್ರಗಳ ಐದು ಮಂದಿ ಸಾಧಕರಿಗೆ ಗೌರವಾರ್ಪಣೆ

Suddi Udaya

ಇಂದಬೆಟ್ಟು ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ವಲಯ ಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಪಾಲಡ್ಕ-ಕುದ್ರಡ್ಕ ಒಕ್ಕೂಟದ ವತಿಯಿಂದ ಶಾಲಾ ಮಕ್ಕಳಿಗೆ ಹಣ್ಣುಹಂಪಲು ವಿತರಣೆ

Suddi Udaya

ತೆಂಕಕಾರಂದೂರು ಗ್ರಾಮದಲ್ಲಿ ರಾಜರೋಷವಾಗಿ ತಿರುಗಾಡುತ್ತಿರುವ ಚಿರತೆ: ಜನತೆ ಕಂಗಾಲು

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!