30.7 C
ಪುತ್ತೂರು, ಬೆಳ್ತಂಗಡಿ
April 24, 2026
ಧಾರ್ಮಿಕ

ಅಯೋಧ್ಯೆ ರಾಮಮಂದಿರಕ್ಕಾಗಿ ಬಲಿದಾನಗೈದ ಅಪೂರ್ವ ಜೈನ ಸಹೋದರರು

ಇದೀಗ ಭವ್ಯ ರಾಮಮಂದಿರ ನಿರ್ಮಾಣಗೊಳ್ಳುತ್ತಿದೆ ಹಾಗೂ ಭಗವಾನ್ ರಾಮನ ಪ್ರತಿಮೆಯ ಪ್ರತಿಷ್ಠಾಪನೆಯೂ ನಡೆಯಲಿದೆ. ರಾಮನ ಭಕ್ತರೆಲ್ಲರಿಗೂ ಶುಭಾಶಯಗಳು.

ರಾಮ ಮಂದಿರಕ್ಕಾಗಿ ನಿರಂತರ ಹೋರಾಟ ತ್ಯಾಗ ಬಲಿದಾನಗಳು ನಡೆದಿವೆ. ಅದರಲ್ಲೂ 33 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆದು ಬಂಗಾಳದ ಪೂರ್ಣಿಮಾ ಅವರು ಸಂತೋಷದ ನಡುವೆಯೂ ಕಣ್ಣೀರು ಸುರಿಸುತ್ತಾರೆ.

ಹೌದು 33 ವರ್ಷಗಳ ಹಿಂದೆ ಬಂಗಾಳದಲ್ಲಿ ಜೈನ ವ್ಯಾಪಾರಿ ಕುಟುಂಬವೊಂದು ವಾಸ ಮಾಡುತ್ತಿತ್ತು. ಅವರಲ್ಲಿ ಇಬ್ಬರು ಗಂಡು ಮಕ್ಕಳು ರಾಮ್ ಮತ್ತು ಶರದ್ ಹಾಗೂ ಪುತ್ರಿ ಪೂರ್ಣಿಮಾ ಅವರದು ಸುಖೀ ಕುಟುಂಬ. ಗಂಡು ಹುಡುಗರು 25 ವರ್ಷದ ಒಳಗಿನವರಾಗಿದ್ದು ಬಿಸಿ ರಕ್ತದ ತರುಣರಾಗಿದ್ದರು. ಅಲ್ಲದೇ ವಿಶ್ವ ಹಿಂದೂ ಪರಿಷದ್ ನ ಸಕ್ರೀಯ ಕಾರ್ಯಕರ್ತರಾಗಿದ್ದರು. 90 ದಶಕದ ಆದಿ ರಾಮ ಮಂದಿರದ ನಿರ್ಮಾಣಕ್ಕಾಗಿ ಆಗ್ರಹಿಸಿ ಭಾರಿ ಪ್ರತಿಭಟನೆ ಆಂದೋಲನ ನಡೆಯುತ್ತಿತ್ತು.

ಇದೇ ಸಮಯದಲ್ಲಿ ಈ ವ್ಯಾಪಾರಿ ಕುಟುಂಬದ ರಾಮ್ ಮತ್ತು ಶರದ್ ರಾಮ ಮಂದಿರ ನಿರ್ಮಾಣಕ್ಕಾಗಿ ಉಗ್ರ ಪ್ರತಿಭಟನೆಗಾಗಿ ಟೊಂಕ ಕಟ್ಟಿ ನಿಂತರು. ಸಹೋದರಿಗೆ ನಿನ್ನ ಮದುವೆ ನಮ್ಮ ನೇತೃತ್ವದಲ್ಲಿಯೇ ನಡೆಯುತ್ತದೆ. ನಾವು ಅಯೋಧ್ಯೆಗೆ ಕರಸೇವೆಗಾಗಿ ತೆರಳಿ ನಂತರ ಮರಳಿ ನಿನ್ನ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತೇವೆ ಎಂದರು. ತುಂಬಿದ ಕಣ್ಣ ಹನಿಗಳಿಂದ ಸಹೋದರಿ ಪೂರ್ಣಿಮಾ ಸಹೋದರರನ್ನು ಬೀಳ್ಕೊಟ್ಟಳು. ಸಹೋದರರೇ ನೀವು ಹೋದ ಕಾರ್ಯ ನೆರವೇರಲಿ , ನೀವು ಗೆದ್ದು ಬನ್ನಿ ಎಂದು ಕಣ್ಣೀರು ಸುರಿಸುತ್ತಾ ತಬ್ಬಿ ಬೀಳ್ಕೊಟ್ಟಳು.

ರಾಮ್ ಶರದ್ ತಮ್ಮಮನೆಯನ್ನು ತೊರೆದು ಅಯೋಧ್ಯೆಯತ್ತ ಧಾವಿಸಿದರು. ಅನೇಕ ಎಡರು ತೊಡರುಗಳನ್ನು ಎದುರಿಸಿ ಅಯೋಧ್ಯೆಯನ್ನು ತಲುಪಿ ವಿವಾದಿತ ಸ್ಥಳದಲ್ಲಿ ಧ್ವಜವನ್ನು ಹಾರಿಸಿದ ಮೊದಲಿಗರಾದರು. ಈ ವೀರ ಸಹೋದರರ ಪರಾಕ್ರಮವನ್ನು ಕೋಟಿ ಕೋಟಿ ಭಾರತೀಯರು ಕಣ್ಣು ತುಂಬಿಕೊಂಡರು. ವೀರ ಸಹೋದರರನ್ನು ಹಾಡಿ ಕೊಂಡಾಡಿದರು.

ಆದರೆ ಮರುಕ್ಷಣವೇ ಸಿಡಿಗುಂಡುಗಳು ಸಾಲುಸಾಲಾಗಿ ಬಂದು ಕರಸೇವಕರನ್ನು ಮುತ್ತಿಕ್ಕಿತು. ಧರ್ಮಧ್ವಜವನ್ನು ಗಗನದೆತ್ತರ ಹಾರಿಸಿದ ವೀರ ಸಹೋದರರ ಎದೆಯನ್ನು ಸೀಳಿದ ಪೋಲೀಸರ ಗುಂಡು ನೀಲಾಕಾಶದಲ್ಲಿ ಲೀನವಾಯಿತು. ಹೇ … ರಾಮ್ … ಎಂಬ ಘೋಷಣೆಯನ್ನು ಕೂಗುತ್ತಾ ಸಹೋದರರಿಬ್ಬರು ಧರೆಗೆ ಉರುಳಿದರು. ವೀರ ಸಹೋದರರ ವೀರ ಮರಣವನ್ನು ಕಂಡ ರಾಮಭಕ್ತರು ಅಶ್ರುತರ್ಪಣ ಅರ್ಪಿಸಿದರು. ನಿಮ್ಮಗಳ ಬಲಿದಾನ ವ್ಯರ್ಥವಾಗಲು ಬಿಡೆವು , ರಾಮ ಮಂದಿರ ಕಟ್ಟುವೆವು ಅಲ್ಲೇ ಎಂಬ ಶಪಥ ಮಾಡಿದರು.

ಇತ್ತ ಪೂರ್ಣಿಮಾ ಸಹೋದರರ ದಾರಿಯನ್ನು ಕಾಯುತ್ತಿರುವಾಗ ಸಹೋದರರ ಸಾವಿನ ಸುದ್ಧಿ ಬರಸಿಡಿಲಿನಂತೆ ಬಂದೆರಗಿತು. ಪೂರ್ಣಿಮಾ ಮತ್ತು ಇಡೀ ಕುಟುಂಬ ಬಲಿದಾನ ಗೈದ ಸಹೋದರರಿಗೆ ಕಣ್ಣೀರ ಧಾರೆಯ ಮೂಲಕ ಅಂತಿಮ ನಮನ ಸಲ್ಲಿಸಿದರು.

ಇದೀಗ ರಾಮ ಮಂದಿರ ಪ್ರತಿಷ್ಠಾಪನೆಯ ಆಮಂತ್ರಣ ಪೂರ್ಣಿಮಾ ಅವರಿಗೆ ತಲುಪಿದೆ. ಒದ್ದೆ ಕಣ್ಣಿನಿಂದ ಸಹೋದರಿ ಪೂರ್ಣಿಮಾ ಆಮಂತ್ರಣ ಪತ್ರಿಕೆಯನ್ನು ಸಹೋದರರ ಫೋಟೋ ಮುಂದೆ ಇಟ್ಟು ಭಾವೋದ್ವೇಗದಿಂದ ಸಹೋದರರೇ , ನಿಮ್ಮ ಬಲಿದಾನ ವ್ಯರ್ಥವಾಗಿಲ್ಲ, ನಿಮ್ಮ ಕನಸು ನನಸಾಗಿದೆ, ಭವ್ಯ ರಾಮ ಮಂದಿರ ತಲೆ ಎತ್ತುತ್ತಿದೆ. ಮೇಲಿನಿಂದಲೇ ನೀವುಗಳು ಮಂದಿರದ ಸೊಬಗನ್ನು ಸವಿಯಿರಿ ಎಂದು ಮನದಲ್ಲೇ ನಿವೇದಿಸಿಕೊಂಡು ಕಣ್ಣೀರು ಒರೆಸಿಕೊಂಡು ತನ್ಮಯಳಾಗುತ್ತಾಳೆ.

#ಸಹೋದರರಬಲಿದಾನಮರೆಯದಿರಿ

ಸಹೋದರರ ಬಲಿದಾನ ಮರೆಯಲಾಗದ ಘಟನೆ. ಅನೇಕರು ತ್ಯಾಗ ಬಲಿದಾನ ಹೋರಾಟ ಮಾಡಿದ್ದರಿಂದಲೇ ಇಂದು ರಾಮ ಮಂದಿರ ನಿರ್ಮಾಣವಾಗಿದೆ. ಈ ಸಮಯದಲ್ಲಿ ಇವರೆಲ್ಲರಿಗೂ ಸೂಕ್ತ ಗೌರವ ಸಲ್ಲಿಸಬೇಕಾದದ್ದು ಎಲ್ಲರ ಕರ್ತವ್ಯವಾಗಿದೆ.

✍️ ನಿರಂಜನ್ ಜೈನ್ ಕುದ್ಯಾಡಿ

Related posts

ಎ.30: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 15ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ:

Suddi Udaya

ಅರೆಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಕುಂಭಾಭಿಷೇಕ ಪೂರ್ವಭಾವಿಯಾಗಿ ಚಪ್ಪರ ಮೂಹೂರ್ತ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶರತ್ ಕೃಷ್ಣ ಪಡ್ವೆಟ್ನಾಯ ಭೇಟಿ : ಸಕಲ ಸಿದ್ಧತೆಗಳ ವೀಕ್ಷಣೆ

Suddi Udaya

ಮದಡ್ಕ: ಶ್ರೀ ರಾಮನವಮಿ ಉತ್ಸವ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಭಕ್ತಿ ಪಾರಮ್ಯಕ್ಕೆ ಅಣಿಯಾದ ಮಲೆಂಗಲ್ಲು ಬ್ರಹ್ಮಕಲಶೋತ್ಸವ

Suddi Udaya
error: Content is protected !!