ಬೆಳ್ತಂಗಡಿ: ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ಜೋಡುಕಟ್ಟೆ ರಸ್ತೆ ಸುಮಾರು 1.00ಕಿ.ಮೀ ಉದ್ದದ ರಸ್ತೆ ಡಾಮರೀಕರಣಗೊಂಡು ಹಲವಾರು ವರ್ಷಗಳೇ ಕಳೆದರು ರಸ್ತೆಗಿಲ್ಲ ದುರಸ್ತಿ ಭಾಗ್ಯ ಸರ್ಕಾರ ಈ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ದುರಸ್ತಿಗೊಳಿಸಬೇಕು ಎಂದು ತೆಕ್ಕಾರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಹಾಲಿ ಸದಸ್ಯ ಅಬ್ದುಲ್ ರಝಾಕ್ ಆಗ್ರಹಿಸಿದ್ದಾರೆ.
ಈ ರಸ್ತೆಯಲ್ಲಿ ನಿತ್ಯ ಹಲವಾರು ವಾಹನಗಳು ಸಂಚರಿಸುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ನಾಗರೀಕರ ಪ್ರಮುಖ ಕೊಂಡಿಯಾಗಿದೆ ಈ ರಸ್ತೆ. ತೆಕ್ಕಾರಿನ ಜನತೆ ನ್ಯಾಯ ಬೆಲೆ ಅಂಗಡಿಗೆ ಸಾಗಲು ಇದೆ ರಸ್ತೆಯನ್ನು ಅನುಸರಿಸಬೇಕು. ದಿನಂಪ್ರತಿ ಖಾಸಗಿ ಬಸ್ ಕೂಡ ಇದೇ ರಸ್ತೆಯಲ್ಲಿ ಸಂಚರಿಸುತ್ತದೆ. ಮಳೆಗಾಲದಲ್ಲೂ ಅಂತು ಸಂಪೂರ್ಣವಾಗಿ ರಸ್ತೆ ಹದಗೆಟ್ಟು ಸಂಚಾರ ದುಸ್ತರವಾಗುತ್ತಿದೆ.
ಈ ಬಗ್ಗೆ ಹಲವಾರು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಸಂಬಂಧ ಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಇದೀಗ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ರಸ್ತೆ ನಿರ್ಮಾಣಕ್ಕೆ ರೂ. 69.50 ಲಕ್ಷ ಅನುದಾನದ ಅಗತ್ಯವಿದೆ ಎಂದು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದು ಸರ್ಕಾರ ಶೀಘ್ರ ಅತೀ ಶೀಘ್ರವಾಗಿ ರಸ್ತೆ ನಿರ್ಮಾಣಗೊಳಿಸಿ ದುಸ್ತರ ಸಂಚಾರವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.













