23.7 C
ಪುತ್ತೂರು, ಬೆಳ್ತಂಗಡಿ
April 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಧರ್ಮಸ್ಥಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಇಬ್ಬರ ಬಂಧನ-ರೂ.5.32 ಲಕ್ಷದ ಚಿನ್ನಾಭರಣ ವಶ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದ ಆಂಧ್ರ ಪ್ರದೇಶದ ಯಾತ್ರಾರ್ಥಿಗಳ ಬ್ಯಾಗ್ ನಿಂದ ರೂ.6.79 ಲಕ್ಷ ಮೌಲ್ಯದ ೯೭ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ ತಾಯಿ-ಮಗಳನ್ನು ಐದು ತಿಂಗಳ ಬಳಿಕ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ ಸಟಲ್ಮೆಂಟ್ ೨ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬಿ.ಬಿ. ಜಾನ್(59ವ) ಮತ್ತು ಮಗಳು ಮಸಾಭಿ@ಆರತಿ (34ವ) ಎಂಬವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನಲೆ: ಆಂಧ್ರಪ್ರದೇಶ ನೆಲ್ಲೂರು ನಿವಾಸಿ ಜೆ. ಲತಾ ಮತ್ತು ಕುಟುಂಬ ಸಮೇತ ಕಳೆದ ಮೇ 3ರಂದು ಧರ್ಮಸ್ಥಳಕ್ಕೆ ಬಂದು ಸಂಜೆ 5 ಗಂಟೆಗೆ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗಿದ್ದರು. ಹೋಗುವಾಗ ತಮ್ಮ ಜೊತೆ ಬ್ಯಾಗ್‌ನ್ನು ಒಯ್ದಿದ್ದರು. ಬ್ಯಾಗ್‌ನಲ್ಲಿ ರೂ. 6.79 ಲಕ್ಷ ಮೌಲ್ಯದ 97 ಗ್ರಾಂ ಚಿನ್ನಾಭರಣ ಇತ್ತು. ದೇವರ ದರ್ಶನದ ಬಳಿಕ ಮರುದಿನ ಮೇ 4ರಂದು ಅವರು ಉಡುಪಿ ಕಡೆ ಬೇರೊಂದು ಕೆಲಸದ ವಿಚಾರವಾಗಿ ಹೋಗುತ್ತಿದ್ದರು. ದಾರಿಯಲ್ಲಿ ಬ್ಯಾಗ್‌ನ್ನು ತೆರೆದು ನೋಡುವಾಗ ಒಳಗಡೆ ಇಟ್ಟಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಕೂಡಲೇ ಉಡುಪಿಗೆ ತಲುಪಿದ್ದ ಅವರು ಅಲ್ಲಿಂದ ವಾಪಸ್ ಧರ್ಮಸ್ಥಳಕ್ಕೆ ಬಂದು ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ಕಳವು ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಕಳ್ಳರು ಪೊಲೀಸ್ ಬಲೆಗೆ: ಧರ್ಮಸ್ಥಳ ಪೊಲೀಸರು ಪ್ರಕರಣದ ಬಗ್ಗೆ ಕಳೆದ ಐದು ತಿಂಗಳಿನಿಂದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ನ.23ರಂದು ಕಳ್ಳರಿಬ್ಬರು ಮತ್ತೆ ಧರ್ಮಸ್ಥಳಕ್ಕೆ ಬಂದಿದ್ದು, ಧರ್ಮಸ್ಥಳದ ದ್ವಾರದ ಬಳಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಸಮಯ ಖಚಿತ ಮಾಹಿತಿ ಧಾರವಾಡ ಜಿಲ್ಲೆಯ ಹುಬ್ಬಳಿ ನಗರದ ಸಟಲ್ಮೆಂಟ್ 2ನೇ ಕ್ರಾಸ್ ಗಂಗಾಧರ ನಗರ ನಿವಾಸಿ ತಾಯಿ ಬಿ.ಬಿ. ಜಾನ್ ಮತ್ತು ಮಗಳು ಮಸಾಭಿ @ ಆರತಿ ಎಂಬವರನ್ನು ಸೆರೆ ಹಿಡಿದಿದ್ದಾರೆ.

ಇಬ್ಬರು ಆರೋಪಿಗಳನ್ನು ನ.೨೩ರಂದು ಭಾನುವಾರ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನ.24ರಂದು ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳ್ಳತನ ಮಾಡಿದ ಸುಮಾರು ರೂ.5.32 ಲಕ್ಷ ಮೌಲ್ಯದ 76 ಗ್ರಾಂ ಚಿನ್ನಾಭರಣ ಆರೋಪಿಗಳ ಹುಬ್ಬಳಿ ಮನೆಯಿಂದ ನ.೨೫ರಂದು ಮಂಗಳವಾರ ಧರ್ಮಸ್ಥಳ ಪೊಲೀಸರು ಮಹಜರು ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳಿಬ್ಬರ ಮೇಲೆ ಈ ಹಿಂದೆ ಹಲವು ಕಳ್ಳತನ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇಬ್ಬರು ಕೂಡ ದೇವಾಲಯಗಳನ್ನು ಟಾರ್ಗೆಟ್ ಮಾಡಿ ಭಕ್ತಾಧಿಗಳ ಸೋಗಿನಲ್ಲಿ ಹೋಗಿ ಚಿನ್ನಾಭರಣ ಮತ್ತು ಹಣ ಕಳ್ಳತನ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳ ವಿಚಾರಣೆ ಹಾಗೂ ಮಹಜರು ಮುಗಿಸಿರುವ ಕಾರಣದಿಂದ ಧರ್ಮಸ್ಥಳ ಪೊಲೀಸರು ನ.26 ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ್ ನೇತೃತ್ವದಲ್ಲಿ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ, ಸಿಬ್ಬಂದಿ ರಾಜೇಶ್, ಪ್ರಶಾಂತ್, ಚರಣ್ ರಾಜ್, ಸಂದೀಪ್, ಮಲ್ಲಿಕಾರ್ಜುನ್, ಶಶಿಕುಮಾರ್, ಮಂಜುನಾಥ್ ಪಾಟೀಲ್, ಪ್ರಮೋದಿನಿ, ಸುನಿತಾ, ಸೌಭಾಗ್ಯ, ದೀಪಾ, ಉಷಾ ತಂಡದ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಕಕ್ಕಿಂಜೆಯ ಜೆ.ಕೆ ಎಲೆಕ್ಟ್ರಿಕಲ್ಸ್‌ ಮತ್ತು ವೈಂಡಸಸ್‌೯ ಅಂಗಡಿಯಿಂದ
ರೂ.94 ಸಾವಿರ ಮೌಲ್ಯದ 20 ಕೆ.ಜಿ ಸ್ಕ್ರಾಪ್‌ ಮತ್ತು ದುರಸ್ತಿಗೆ ಬಂದ ಪಂಪುಗಳ ಕಳವು

Suddi Udaya

ಜು.19: ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ: ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ

Suddi Udaya

ಬಂಗೇರರು ಕೊನೆಯ ಬಾರಿ ವಿಧಾನಸೌಧಕ್ಕೆ ಭೇಟಿ ನೀಡಿ ಶಿಫಾರಸ್ಸು ಮಾಡಿದ ವೇಣೂರು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘಕ್ಕೆ ಜಮೀನು ಮಂಜೂರು ಮಾಡಿ ಗೌರವ ನೀಡಿದ ಮುಖ್ಯಮಂತ್ರಿಗಳು

Suddi Udaya

ಉಜಿರೆಯಲ್ಲಿ ಸುಗಂಧಿ’ ಸ್ ಗಲ್ಲಿ ಕಿಚನ್ ಹೋಟೆಲ್ ಉದ್ಘಾಟನೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 233.13 ಕೋಟಿ ವ್ಯವಹಾರ, ಸದಸ್ಯರಿಗೆ ಶೇ. 15 ಡಿವಿಡೆಂಟ್

Suddi Udaya

ಮಾನವ ಬಂಧುತ್ವ ವೇದಿಕೆ ಕರ್ನಾಟಕ ದಾವಣಗೆರೆ ಹರಿಹರದ ಮೈತ್ರಿವನದಲ್ಲಿ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ

Suddi Udaya
error: Content is protected !!