23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ ಎಸ್.ಡಿ.ಎಂ ( ಸ್ವಾಯತ್ತ) ಕಾಲೇಜು : ಪೋಷಕ ಶಿಕ್ಷಕರ ಸಂಘದ ಸಭೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಪದವಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪೋಷಕ ಹಾಗೂ ಶಿಕ್ಷಕರ ಸಂಘದ ವಾರ್ಷಿಕ ಸಭೆ ನಡೆಯಿತು.

ಸಭೆಯಲ್ಲಿ ನಿವೃತ್ತ ಪ್ರಾಂಶುಪಾಲ, ಹಿರಿಯ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ಡಾ. ಟಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶಿಕ್ಷಕರು ಮತ್ತು ಪೋಷಕರನ್ನು ಉದ್ದೇಶಿಸಿ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳಲ್ಲಿ ಮೌಲ್ಯ ಮತ್ತು ಕೌಶಲ್ಯಬರಿತ ಶಿಕ್ಷಣವನ್ನು ನೀಡುವ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಅರಿವನ್ನು ಮೂಡಿಸಬೇಕು. ಪ್ರಾಪಂಚಿಕ ಜ್ಞಾನ ನಮ್ಮನ್ನು ಮತ್ತಷ್ಟು ಪ್ರಬುದ್ಧರನ್ನಾಗಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ನಕಾರಾತ್ಮಕ ಆಕರ್ಷಣೆಗಳಿಗೆ ಒಳಗಾಗದೆ, ಉನ್ನತ ಜ್ಞಾನ ಅರಸಿಕೊಂಡು ಸಾಗಬೇಕು. ಅದು ಅಪಾರ ಫಲಶ್ರುತಿಯನ್ನು ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸುವುದರ ಜೊತೆಗೆ ಜವಾಬ್ದಾರಿ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಪೋಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಕುರಿತು ವಿಶೇಷ ಕಾಳಜಿ ಮತ್ತು ಜಾಗೃತೆಯನ್ನು ವಹಿಸಬೇಕು. ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಸಂಸ್ಥೆ ಮತ್ತು ಶಿಕ್ಷಕರೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳಬೇಕು. ಕಾಲೇಜಿನಲ್ಲಿ ನಿರಂತರವಾಗಿ ನಡೆಯುವ ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಪೋಷಕರು ವಿದ್ಯಾರ್ಥಿಗಳ ಬೆಳವಣಿಗೆಯ ಅನೇಕ ವಿಚಾರಗಳನ್ನು ಚರ್ಚಿಸಿದರು.

ಸಭೆಯ ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯ್ಕ್ ಹಾಗು ಐಕ್ಯುಎಸಿ ಸಂಯೋಜಕ ಗಜಾನನ ಭಟ್ ಉಪಸ್ಥಿತರಿದ್ದರು. ಸಭೆಯಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಪೋಷಕರು ಭಾಗಿಯಾಗಿದ್ದರು.

ಸಭೆಯನ್ನು ಕಾಲೇಜಿನ ರಿಜಿಸ್ಟ್ರಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಭಟ್‌ ನಿರೂಪಿಸಿ, ವಂದಿಸಿದರು. ಸಭೆಯನ್ನು ಕಾಲೇಜಿನ ವಿದ್ಯಾರ್ಥಿ ಕಾರ್ಯಕ್ಷಮತೆ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಸೈಲೇಶ್ ಕುಮಾರ್ ಸಂಯೋಜಿಸಿದರು.

ಜ್ಞಾನಾರ್ಜನೆಗೆ ವಿಶೇಷ ಯೋಜನೆ ಪರಿಪಾಲನೆ :

ಸಂಸ್ಥೆಯು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅತ್ಯಾಧುನಿಕ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸಿದ್ದು, ಇಲ್ಲಿ ವಿದ್ಯಾರ್ಥಿಗಳು ಸೆಮಿಸ್ಟರ್ ಗೆ ಕಡ್ಡಾಯವಾಗಿ ಕನಿಷ್ಠ 40 ಗಂಟೆ ಸಮಯವನ್ನು ಪುಸ್ತಕಗಳನ್ನು ಓದಲೆಂದೇ ವಿನಿಯೋಗಿಸಬೇಕಾದ ನಿಯಮ ಜಾರಿಯಲ್ಲಿದೆ. ಇದರ ಜೊತೆಯಲ್ಲಿ ಹೆಚ್ಚಿನ ಸಮಯವನ್ನು ಗ್ರಂಥಾಲಯದಲ್ಲೇ ಕಳೆದವರಿಗೆ ವಿಶೇಷ ವ್ಯವಸ್ಥೆಗಳ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಈ ಯೋಜನೆಗೆ ಎಸ್.ಡಿ.ಎಂ ಶಿಕ್ಷಣಗಳ‌ ಕಾರ್ಯದರ್ಶಿಯಾಗಿದ್ದ ದಿವಂಗತ ಡಾ. ಬಿ ಯಶೋವರ್ಮ ವಿದ್ಯಾರ್ಥಿಗಳ ಮೇಲಿನ ದೂರದೃಷ್ಟಿತ್ವ ಮತ್ತು ವಿಶೇಷ ಕಾಳಜಿಯಿಂದ ಪುಸ್ತಕಗಳ ರುಚಿಯನ್ನು ಯುವ ಸಮುದಾಯಕ್ಕೆ ತಲುಪಿಸಲು ಜಾರಿ ತಂದರು. ಈ ಯೋಜನೆಗೆ ಪೋಷಕರು ವಿಶೇಷ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು.

Related posts

ಜ.27,30: ಕೊಕ್ಕಡ ಮಾಯಿಲಕೋಟೆ ಸೀಮೆ ಕ್ಷೇತ್ರದಲ್ಲಿ ನಾಗಪ್ರತಿಷ್ಠೆ ಮತ್ತು ವಾರ್ಷಿಕ ನೇಮೋತ್ಸವ

Suddi Udaya

ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ತೋರಟ್ ವರ್ಗಾವಣೆ: ನೂತನ ಡಿವೈಎಸ್ಪಿ ಆಗಿ ವಿಜಯ ಪ್ರಸಾದ್ ನೇಮಕ

Suddi Udaya

ಕನ್ಯಾಡಿ ಶ್ರೀ ಹರಿದ್ವಾರ ಶಾಖಾ ಮಠದಲ್ಲಿ 7ನೇ ವರ್ಷದ ವಾರ್ಷಿಕೋತ್ಸವ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ವಿಜೃಂಭಣೆಯ ಸ್ವಾತ್ರಂತ್ರ್ಯೋತ್ಸವ ಆಚರಣೆ

Suddi Udaya

ಕುಕ್ಕಳ: ತುರ್ತು ಸ್ಪಂದಿಸಿ ಸಮಸ್ಯೆ ಪರಿಹರಿಸಿದ ಬೆಳ್ತಂಗಡಿ ಕಾರ್ಯಪಾಲಕರು

Suddi Udaya

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya
error: Content is protected !!