ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು
ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿ, ಆಯುಷ್ ಮಂತ್ರಾಲಯದ ಸಹಯೋಗದಲ್ಲಿ SDM ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಆಸ್ಪತ್ರೆ, ಶಾಂತಿವನದಲ್ಲಿ “ಅತಿಸ್ಥೂಲತೆ ನಿರ್ವಹಣೆಗಾಗಿ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಕಾರ್ಯಾಗಾರ”ವು ಯಶಸ್ವಿಯಾಗಿ ನಡೆಯಿತು.
ಮುಖ್ಯ ಅತಿಥಿ ಮುನಿಯಾಲ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ಮಣಿಪಾಲದ ಪ್ರಾಂಶುಪಾಲೆ ಡಾ. ಅಪರ್ಣಾ ಸುರೇಂದ್ರ ಅತಿಸ್ಥೂಲತೆ ಒಂದು ಜೀವನಶೈಲಿ ಸಂಬಂಧಿತ ಸಮಸ್ಯೆಯಾಗಿದ್ದು, ಯೋಗಾಭ್ಯಾಸ, ನಿಯಂತ್ರಿತ ಆಹಾರ ಪದ್ಧತಿ ಹಾಗೂ ನೈಸರ್ಗಿಕ ಚಿಕಿತ್ಸೆಯಿಂದ ಸಮಗ್ರ ಪರಿಹಾರ ಸಾಧ್ಯವೆಂದು ವಿವರಿಸಿದರು. ಸಮತೋಲನದ ಆಹಾರ, ನಿಯಮಿತ ವ್ಯಾಯಾಮ ಮತ್ತು ಮಾನಸಿಕ ಶಾಂತಿಯ ಮಹತ್ವವನ್ನು ಅವರು ಒತ್ತಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಆಸ್ಪತ್ರೆ, ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ವಹಿಸಿ ಮಾತನಾಡಿ ಆರೋಗ್ಯಕರ ಜೀವನಶೈಲಿಯ ಅಗತ್ಯತೆ ಹಾಗೂ ಅತಿಸ್ಥೂಲತೆ ನಿಯಂತ್ರಣದಲ್ಲಿ ಯೋಗದ ಪಾತ್ರವನ್ನು ವಿವರಿಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ಉಪಪ್ರಾಚಾರ್ಯೆ ಡಾ. ಸುಜಾತ ಕೆ. ಜೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಮತ್ತು ಭಾಗವಹಿಸಿದವರಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಶಾಂತಿವನ ಟ್ರಸ್ಟ್ನ ಕಾರ್ಯದರ್ಶಿ ಯು. ಜಗನ್ನಾಥ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಆಹಾರ ಮತ್ತು ಪೋಷಣಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಡೀನ್ ಡಾ. ಗೀತಾ ಬಿ. ಶೆಟ್ಟಿ ಪ್ರಾಸ್ತಾವಿಕ ಭಾಷಣವನ್ನು ಮಾಡಿ ಕಾರ್ಯಕ್ರಮ ಸಂಯೋಜಿಸಿದರು. ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ . ಬಿಂದು ವಂದಿಸಿದರು. ಎಂ.ಡಿ ವಿದ್ಯಾರ್ಥಿನಿ ಡಾ. ಭಾಷಿಣಿ ನಿರೂಪಿಸಿದರು.















