23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಪದವಿ ಪ್ರಧಾನ ಸಮಾರಂಭ

ಉಜಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನ ಮಹಾವಿದ್ಯಾಲಯ ಹಾಗೂ ಇನ್ನಿತರ ಸಂಸ್ಥೆಗಳ ಸಹಯೋಗದಲ್ಲಿ ಪೌಷ್ಟಿಕಾಂಶ ಮೌಲ್ಯ, ಜೀವನಶೈಲಿ ಮೌಲ್ಯ, ಮತ್ತು ಕಡ್ಡಾಯ ಯೋಗ ಶಿಕ್ಷಣ ಯೋಜನೆಯನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವುದಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ ಇದರ ಗೌರವಾನ್ವಿತ ಉಪಕುಲಪತಿ ಡಾ. ಭಗವಾನ್ ಬಿ.ಸಿ ಹೇಳಿದರು.

ಉಜಿರೆಯ ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆ ಇದರ 31ನೇಯ ಪದವಿ ಪ್ರಧಾನ ಸಮಾರಂಭ’ದಲ್ಲಿ ಮಾತನಾಡಿದರು. ಈ ಕಾರ್ಯಕ್ರಮವು ಮಾ. 22ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಜರುಗಿತು.

ಭಾರತವು ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ನಾಯಕತ್ವ ಸ್ಥಾನ ಪಡೆದುಕೊಳ್ಳುವುದರ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಪ್ರಾಚೀನ ಕಾಲದಿಂದಲೂ ಚಿಕಿತ್ಸೆಯಲ್ಲಿ ಚರಕ, ಶುಶ್ರುತರಂತಹ ಭಾರತೀಯರು ಮುಂಚೂಣಿಯಲ್ಲಿದ್ದರು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ವಿಷಯದ ಕುರಿತು ಅರಿವು ಕಡಿಮೆಯಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನದಲ್ಲಿ ಪಾಶ್ಚ್ಯ ದೇಶಗಳ ಪ್ರಾಬಲ್ಯತೆಗೆ ಸಿಲುಕದೆ ಭಾರತದ ಅದ್ಭುತ ವೈಜ್ಞಾನಿಕ ವೈದ್ಯಕೀಯ ಪರಂಪರೆಗೆ ಗಮನಹರಿಸುವ ಅಗತ್ಯವಿದೆ. ಏಕೆಂದರೆ ಜಗತ್ತಿನಾದ್ಯಂತ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನಗಳನ್ನು ನೋಡಿದರೆ ಪ್ರಕೃತಿಯೊಂದಿಗೆ ಹೊಂದಿಕೊಂಡಿರುವ ಚಿಕಿತ್ಸೆಯು ಮುಂದಿನ ಭವಿಷ್ಯವಾಗಿದೆ, ಎಂದು ಹೇಳಿದರು.

ಪದವಿ ಪಡೆದ ವಿದ್ಯಾರ್ಥಿಗಳ ವೈದ್ಯಕೀಯ ವೃತ್ತಿಗೆ ಶುಭಾಶಯಗಳನ್ನು ತಿಳಿಸುತ್ತಾ, ಸೇವೆ ಎಂಬುದು ಮಹತ್ವಪೂರ್ಣ ಜವಾಬ್ದಾರಿ. ವೈದ್ಯಕೀಯ ವೃತ್ತಿಯ ಮೌಲ್ಯ ಮತ್ತು ತತ್ವಗಳೊಂದಿಗೆ ಪರಾನುಭೂತಿ, ನೈತಿಕತೆ, ಪ್ರಜ್ಞೆ, ಪ್ರಾಮಾಣಿಕತೆ, ವೃತ್ತಿಪರತೆಯ ಜೊತೆಗೆ ಕಾರ್ಯನಿರ್ವಹಿಸಿದಾಗ ವೃತ್ತಿ ಜೀವನದಲ್ಲಿ ತೃಪ್ತಿ ಸಾಧಿಸಬಹುದು. ವಿಶೇಷವಾಗಿ ಎಐ ಇರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸದಾ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾ ಪ್ರಸ್ತುತತೆ ಸಾಧಿಸಿಬೇಕು. ಏಕೆಂದರೆ ಕಲಿಕೆ ನಿಂತರೆ ಜೀವನವೇ ಕೊನೆಗೊಂಡಂತೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.

ಇದೇ ಸಂದರ್ಭದಲ್ಲಿ, ಕಾಲೇಜಿನ ಅಕ್ಯುಪಂಕ್ಚರ್ ಘಟಕವು ಪ್ರಸ್ತುತ ಅನಾರೋಗ್ಯ ತಡೆಗಟ್ಟುವಿಕೆ ಮತ್ತು ಜೀವನಶೈಲಿಯ ಬಗ್ಗೆ ಮಹತ್ವ ನೀಡುತ್ತಿದೆ. ಈ ಘಟಕಕ್ಕೆ ಸಂಬಂಧಿಸಿದ ಪಿಜಿ ವಿಭಾಗವನ್ನು ಪ್ರಾರಂಭಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಉಜಿರೆಯ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಘಟಿಕೋತ್ಸವದ ಪ್ರಾರಂಭ ಮತ್ತು ಮುಕ್ತಾಯವನ್ನು ಘೋಷಿಸಿದರು. ಅಲ್ಲದೇ ಅಧ್ಯಕ್ಷೀಯ ನುಡಿಗಳಲ್ಲಿ, ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಕಾಲೇಜು ಬೆಳೆದು ಬಂದ ಹಾದಿಯನ್ನು ತಿಳಿಸಿದರು. ಪ್ರಸ್ತುತ ಜಗತ್ತಿನಲ್ಲಿ ಹೆಚ್ಚುತ್ತಿರುವ ಜೀವನ ಶೈಲಿ ಅಸ್ವಸ್ಥತೆಯನ್ನು ಗುಣಪಡಿಸಲು ವೈದ್ಯರು ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ತೇರ್ಗಡೆ ಹೊಂದುತ್ತಿರುವ ವಿದ್ಯಾರ್ಥಿಗಳು ಸುಸ್ಥಿರ ವೈದ್ಯಕೀಯ ಅಭ್ಯಾಸದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಡಾ. ಭಗವಾನ್ ಬಿ.ಸಿ ಪದವಿ ಪ್ರಧಾನ ಮಾಡಿದರು. ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಸುಜಾತ ಕೆ.ಜೆ. ಪ್ರಮಾಣ ವಚನ ಬೋಧಿಸಿದರು.

ಕಾಲೇಜಿನ ನ್ಯೂಟ್ರೀಷನ್‌ ಹಾಗೂ ಡಯೆಟಿಕ್ಸ್‌ ವಿಭಾಗದ ಡೀನ್ ಡಾ. ಗೀತಾ ಬಾಲಕೃಷ್ಣ ಶೆಟ್ಟಿ ಕಾಲೇಜಿನ ರಿಸರ್ಚ್ ಸೆಂಟರ್ ನಲ್ಲಿ ಪಿ ಎಚ್ ಡಿ ಪೂರ್ಣಗೊಳಿಸಿದವರಲ್ಲಿ ಮೊದಲಿಗರಾಗಿದ್ದು. ಈ ಸಂದರ್ಭದಲ್ಲಿ ಇವರಿಗೂ ಪದವಿಯನ್ನು ನೀಡಿ ಗೌರವಿಸಲಾಯಿತು. ಡಾ. ಶ್ರೀನಿವಾಸ ಶೆಣೈ. ಕೆ ಅವರಿಗೆ 2023-24ನೇ ಸಾಲಿನ ಅತ್ಯುತ್ತಮ ತೇರ್ಗಡೆ ಹೊಂದುತ್ತಿರುವ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2025 ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡಲಾಯಿತು. ಡಾ. ವೈಶಾಲಿ ಮಠಪತಿ – ಎಂ.ಡಿ. ಪ್ರಕೃತಿ ಚಿಕಿತ್ಸೆ, ಡಾ. ನವ್ಯಾ – ಎಂ.ಡಿ. ಯೋಗ ಕ್ಲಿನಿಕಲ್‌, ಡಾ. ಮಂಜುನಾಥ್ ಆರ್ – ಎಂ.ಡಿ. ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ.

ನಾಲ್ಕು ವರ್ಷಗಳ ಶೈಕ್ಷಣಿಕ ಪಠ್ಯಕ್ರಮದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಡಾ. ಪ್ರತೀಕ್ಷಾ ಹೆಚ್, ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಯೋಗ ಮತ್ತು ಯೋಗ ಥೆರಪಿ ವಿಷಯದಲ್ಲಿಯೂ ಚಿನ್ನದ ಪದಕ ಪಡೆದುಕೊಂಡರು.

ಡಾ. ಪ್ರಕೃತಿ. ಕೆ 2022- 23 ನೇ ಶೈಕ್ಷಣಿಕ ವರ್ಷದಲ್ಲಿ ಆಕ್ಯುಪಂಕ್ಚರ್ ಮತ್ತು ಮೆಡಿಸಿನ್ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದಕ್ಕೆ ಚಿನ್ನದ ಪದಕ ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದಲ್ಲಿ ಎರಡನೇ ಅಗ್ರಸ್ಥಾನ ಪಡೆದುಕೊಂಡರು.

ಡಾ. ಶಿಲ್ಪಾ ವೈ, ಅವರು ಬಿಎನ್‌ವೈಎಸ್‌ನಲ್ಲಿ ನಾಲ್ಕನೇ ಸ್ಥಾನ ಮತ್ತು ಡಾ. ಜಿ. ಪ್ರಫುಲ್ಲ ತಮನ್ಕರ್, ಅವರು ಬಿಎನ್‌ವೈಎಸ್‌ನಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ, ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಕೆ, ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ: ರೂ. 25.82 ಲಕ್ಷ ನಿವ್ವಳ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್

Suddi Udaya

ಸವಣಾಲು : ರಿಕ್ಷಾಗೆ ಬೈಕ್ ಡಿಕ್ಕಿ: ಬೈಕ್‌ ಸವಾರ ಗಂಭೀರ ಗಾಯ

Suddi Udaya

ಬಿಜೆಪಿ ಬಡಗಕಾರಂದೂರು ಬೂತ್ ಸಂಖ್ಯೆ 40 ರ ಅಧ್ಯಕ್ಷರಾಗಿ ಶ್ರೇಯಸ್ ಶೆಟ್ಟಿ, ಕಾರ್ಯದರ್ಶಿಯಾಗಿ ಓಂಕಾರ್ ಜೈನ್ ಆಯ್ಕೆ

Suddi Udaya

ನ.14: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರಿಂದ ಶ್ರೀ ಕ್ಷೇ.ಧ.ಗ್ರಾ.ಯೋ. ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

Suddi Udaya

ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಗೊಂಡ ಸೃಜನ್ ಕೆ.ಆರ್.

Suddi Udaya

ಬೆಳ್ತಂಗಡಿ ವಕೀಲರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!