ಬೆಳ್ತಂಗಡಿ: ಈ ಆಧುನಿಕ ಸಮಾಜದಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಯೂನಿವರ್ಸಿಟಿ ಪ್ರತಿಯೊಬ್ಬರ ಮನೆಯಾಗಬೇಕು. ಮಹಿಳೆಯೊಬ್ಬಳು ತನ್ನನ್ನು ತಾನು ಅರಿತುಕೊಂಡು ನಡೆದರೆ ಯಾವುದೇ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯವನ್ನು ಮಾಡುತ್ತಿರುವ ಬೆಳ್ತಂಗಡಿಯ ಶಾಂತಿಶ್ರೀ ಜೈನ ಮಹಿಳಾ ಸಮಾಜವು ಇಂದು ತಾಲೂಕು ಮಾತ್ರವಲ್ಲದೆ ಜಿಲ್ಲೆಗೆ ಗುರುತಿಸುವಂತಾಗಿದೆ. ನಾವೆಲ್ಲರೂ ಆದರ್ಶ ಸಾಧಕ ಮಹಿಳೆಯರಾದಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸಿ ಗೌರವಿಸುತ್ತದೆ. ಅಂತಹ ಗುರುತರವಾದ ಕಾರ್ಯಕ್ಕೆ ನಾವೆಲ್ಲ ಜೊತೆಯಾಗಿ ಕಾರ್ಯವನ್ನು ಮಾಡಬೇಕು ಹಾಗೂ ಯಾವುದೇ ಸಂದರ್ಭದಲ್ಲಿ ನಮ್ಮತನವನ್ನು ನಾವು ಬಿಟ್ಟುಕೊಡಬಾರದು. ಅದಕ್ಕೊಂದು ನೈಜ ಉದಾಹರಣೆ ವೀರರಾಣಿ ಅಬ್ಬಕ್ಕ, ಕಾಳು ಮೆಣಸಿನ ರಾಣಿ ಎಂದೇ ಪ್ರಸಿದ್ಧಿ ಪಡೆದ ಚೆನ್ನಬೈರಾದೇವಿ ಎಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಮಹಿಳಾ ದಿನಾಚರಣೆಯಂದು ವಿಜಯಲಕ್ಷ್ಮಿ ಕಟೀಲು ರವರು ಮಾತನಾಡಿದರು.
ಕಾರ್ಯಕ್ರಮವನ್ನು ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಪ್ರೊ. ತ್ರಿಶಾಲ ಜೈನ್ ಕೆ ಎಸ್ ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಜಯಲಕ್ಷ್ಮಿ ಅವರು “ಇಂದಿನ ಸಮಾಜದಲ್ಲಿ ಮಹಿಳೆಯರ ಮುಂದಿರುವ ಸವಾಲುಗಳು, ಅದನ್ನು ನಿಭಾಯಿಸಬೇಕಾದ ತಂತ್ರಗಾರಿಕೆ, ಯಶಸ್ಸಿನ ಮಹತ್ವ ಇತ್ಯಾದಿ ವಿಚಾರಗಳನ್ನು ಎಳೆ ಎಳೆಯಾಗಿ ಹಲವಾರು ಉದಾಹರಣೆಗಳೊಂದಿಗೆ ಪ್ರತಿಯೊಬ್ಬರಿಗೂ ಮನಗಟ್ಟಾಗುವಂತೆ ಹೇಳಿದರು . ಈ ವಿಚಾರವನ್ನು ಅರಿತುಕೊಂಡು ನಡೆದರೆ ಮಾತ್ರ ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೊ. ತ್ರಿಶಲಾ ಜೈನ್ ಕೆ ಎಸ್ ಹಾಗೂ ಪ್ರೊ. ಉದಯ ಕುಮಾರ್ ಮಲ್ಲ ದಂಪತಿಗಳನ್ನು ಅವರ ವೈವಾಹಿಕ ಜೀವನದ ಸುವರ್ಣ ಸಂಭ್ರಮದ ಪ್ರಯುಕ್ತ ವಿನೂತನವಾಗಿ ಗೌರವಿಸಿ ಅವರಿಂದ ಸದಸ್ಯರೆಲ್ಲರೂ ಆಶೀರ್ವಾದವನ್ನು ಪಡೆದರು.
ಈ ಸಂದರ್ಭದಲ್ಲಿ ವೈವಾಹಿಕ ಜೀವನದ ಸುವರ್ಣ ಸಂಭ್ರಮದ ಕುರಿತು ಸ್ವರಚಿತ ಕವನವನ್ನು ಪದ್ಮಾವತಿ ಬಳಂಜರವರು ಹಾಡಿದರು.
ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಶಾಂತಿಶ್ರೀ ಸಮಾಜದ ವತಿಯಿಂದ ಘಟಕ ಸಭೆಗಳಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಸದಸ್ಯರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾಗಿರುವ ಪ್ರೊ. ತ್ರಿಶಾಲ ಜೈನ್ ಕೆ ಎಸ್ ” ದೇಶದ ನಾನಾ ಭಾಗಗಳಲ್ಲಿ ಆಳ್ವಿಕೆ ಮಾಡಿರುವ ಜೈನ ರಾಣಿಯರ ಧೈರ್ಯ, ಸಾಹಸ, ಚಾಣಕ್ಯತನ, ಆಡಳಿತ ಶೈಲಿ ಮುಂತಾದ ವಿಚಾರಗಳನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಇಂದು ವಿಶ್ವದಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯರು ಸಾಧಿಸುತ್ತಿರುವ ಸಾಧನೆಗಳು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಮಾತ್ರವಲ್ಲದೆ ಇತ್ತೀಚೆಗೆ ಬಾಹ್ಯಾಕಾಶ ಯಾನವನ್ನು ಮಾಡಿ ಯಶಸ್ವಿಯಾಗಿ ಧರೆಗೆ ಬಂದಿಳಿದ ಸುನಿತಾ ವಿಲಿಯಮ್ಸ್ ಸಾಧನೆಯ ವಿಷಯಗಳನ್ನು ಪ್ರಸ್ತಾಪಿಸಿದರು. ನಾವೆಲ್ಲರೂ ಜೊತೆಯಾಗಿದ್ದಾಗ ಸರ್ವ ಕಾರ್ಯವನ್ನು ಮಾಡಲು ಸಾಧ್ಯ. ಅಂತಹ ಕಾರ್ಯಕ್ಕೆ ತಾವೆಲ್ಲರೂ ನಮ್ಮ ಜೊತೆ ಕೈಗೂಡಿಸಬೇಕು ಎಂದು ಹೇಳಿದರು.
ಸಪ್ನಾ ಮತ್ತು ಬಳಗದವರ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ರಾಜಶ್ರೀ ಎಸ್ ಹೆಗ್ಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ಅನುಪಮಾ ಡಿ ಜೈನ ವಂದಿಸಿದರು. ಧವಳ ಹಾಗೂ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು.












