ಬೆಳ್ತಂಗಡಿ: ಬಾಂಜಾರು ಮಲೆ ಪ್ರಕೃತಿಯ ಮಡಿಲಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಯುಗಾದಿಯ ನಿಮಿತ್ತ ಎ5ರಂದು ‘ವಂದೇ ಪ್ರಕೃತಿ ಮಾತರಂ’ ಎಂಬ ವಿಷಯವಾಗಿ ಮೊದಲ ಕಾರ್ಯಕ್ರಮ ನಡೆಯಿತು.
ಅಭಾಸಾಪ ಬೆಳ್ತಂಗಡಿ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ ಇವರ ಅಧ್ಯಕ್ಷತೆಯಲ್ಲಿ ಪ್ರಕೃತಿಯೊಡಗೂಡಿ ಸುತ್ತಮುತ್ತಲಿನ ಪರಿಸರ ವೀಕ್ಷಣೆಯ ಜೊತೆಗೆ ಗಣಪತಿ ದೇವಳದ ಕೆಲಸದ ಬಗ್ಗೆ ಮಾತುಕತೆಯ ಮೂಲಕ ಮಾಹಿತಿ ಸಂಗ್ರಹಿಸಲಾಯಿತು. ಕಠಿಣವಾದ ದಾರಿಯ ಜೊತೆಗೂಡಿದ ಪಯಣದಲ್ಲಿ ಸುಂದರ ಮನಸುಗಳ ಭೇಟಿ ಮಾಡಿದ ಸಂಭ್ರಮವನ್ನು ಹಂಚಿಕೊಂಡೆವು.
ಸಂಪನ್ಮೂಲ ವ್ಯಕ್ತಿ ಶ್ರೀಧರ್ ಭಟ್ ಅವರು ಪ್ರಕೃತಿಯೊಡನೆ ಮಾನವನ ಸಂವಾದ, ಹಸಿರನ್ನು ಉಳಿಸುವಂತಹ ಅಗತ್ಯತೆಯ ಜೊತೆಗೆ ಅವಶ್ಯಕತೆಯ ಬಗ್ಗೆ ನೆರೆದವರೆಲ್ಲರಿಗೂ ಅರ್ಥೈಸಿಕೊಡುವ ಜೊತೆಗೆ ಸಮಿತಿಯ ಎಲ್ಲರನ್ನೂ ಪರಿಚಯಿಸಿಕೊಟ್ಟರು.
ಗಣಪತಿ ಭಟ್ ಕುಳಮರ್ವ, ಸುಭಾಷಿಣಿ, ಶ್ರೀಧರ ಭಟ್, ರಮೇಶ್ ಮಯ್ಯ, ರಾಮಕೃಷ್ಣ ಭಟ್ ಬದನಾಜೆ, ಅಶ್ವಿಜ ಶ್ರೀಧರ್, ತ್ರಿವಿಕ್ರಮ ಹೆಬ್ಬಾರ್, ಪ್ರಕಾಶ್ ನಾರಾಯಣ್, ಅಖಿಲಾ ಪ್ರಕಾಶ್ ಇವರೆಲ್ಲರ ಗುಂಪು ಭಜನಾ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಆರಂಭಗೊಂಡಿತು.
ನವೀನ್ ನೆರಿಯ ಸ್ವಾಗತಿಸಿದರು. ಅಭಾಸಾಪ ಬೆಳ್ತಂಗಡಿ ತಾಲೂಕಿನ ಕಾರ್ಯದರ್ಶಿ ಸುಭಾಷಿಣಿ ಧನ್ಯವಾದವನ್ನಿತ್ತರು.












