ಬೆಳ್ತಂಗಡಿ: ಪಿ.ಎಂ ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿ ಇಲ್ಲಿ ಪದವಿಧರೇತರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಉಷಾ ವಿ. ಅವರ ಸೇವಾ ನಿವೃತ್ತಿ ಪ್ರಯುಕ್ತ ಭಾವಪೂರ್ಣ ಬೀಳ್ಕೊಡುಗೆ ಸಮಾರಂಭವು ಮಾ.31ರಂದು ಆಯೋಜಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ಡಿಎಮ್ಸಿ ಅಧ್ಯಕ್ಷ ಜಮೀರ್ ಸಹದಿ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಉಪಾಧ್ಯಕ್ಷೆ ಆರತಿ, ಸರ್ವ ಪದಾಧಿಕಾರಿಗಳು, ಬೆಳ್ತಂಗಡಿ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜಾ, ಶಾಲಾ ಹಿರಿಯ ಶಿಕ್ಷಕ ಸೂರ್ಯನಾರಾಯಣ ಪಿ., ದಿನಕರ ನಾಯಕ್, ಸರಿಕಾ ಕುಮಾರಿ ಹಾಗೂ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಉಷಾ ಅವರ ದೀರ್ಘಕಾಲದ ಶೈಕ್ಷಣಿಕ ಸೇವೆ, ಶಿಸ್ತುಬದ್ಧ ಕಾರ್ಯನಿರ್ವಹಣೆ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಲಾಯಿತು. ಶಿಕ್ಷಕ ಬಂಧುಗಳ ಪರವಾಗಿ ಹಾಗೂ ಎಸ್ಡಿಎಮ್ಸಿ ಯ ಪರವಾಗಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಂತಿಮವಾಗಿ ಎಲ್ಲರೂ ಉಷಾ ವಿ. ಅವರಿಗೆ ನಿವೃತ್ತಿ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಶಾಂತಿ ನೆಲೆಸಲಿ ಎಂದು ಹಾರೈಸಿದರು. ಸಮಾರಂಭವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಹಿರಿಯ ಶಿಕ್ಷಕರಾದ ಶಿವಾನಂದ ಭಂಡಾರಿ ಯವರು ಎಲ್ಲರನ್ನೂ ಸ್ವಾಗತಿಸಿ, ಸಹಶಿಕ್ಷಕರಾದ ರಾಜೇಶ್ ರವರು ಕಾರ್ಯಕ್ರಮ ನಿರೂಪಿಸಿ, ವಿಘ್ನೇಶ್ ಆಚಾರ್ಯ ಕಾರ್ಯಕ್ರಮದ ಚಿತ್ರೀಕರಣ ಮಾಡಿ, ಟಿಜಿಟಿ ಶಿಕ್ಷಕಿ ವಿದ್ಯಾ ಶೆಣೈ ರವರು ಸರ್ವರಿಗೂ ಧನ್ಯವಾದವಿತ್ತರು.












